‘ಒಮಿಕ್ರಾನ್’: ಪರೀಕ್ಷೆ, ಕಣ್ಗಾವಲು ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2021-11-28 15:06 GMT

ಹೊಸದಿಲ್ಲಿ, ನ.28: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಕೊರೋನವೈರಸ್‌ನ ನೂತನ ತಳಿ ‘ಒಮಿಕ್ರಾನ್’ ಕುರಿತು ಹೆಚ್ಚುತ್ತಿರುವ ಆತಂಕಗಳ ನಡುವೆಯೇ ತೀವ್ರ ನಿಯಂತ್ರಣ ಕ್ರಮಗಳು, ಸಕ್ರಿಯ ಕಣ್ಗಾವಲು ಮತ್ತು ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಹೆಚ್ಚಿಸುವಂತೆ ಕೇಂದ್ರ ಸರಕಾರವು ರವಿವಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಅನುಸರಣೆ ಕ್ರಮಗಳಿಗಾಗಿ ಒಮಿಕ್ರಾನ್ ರೂಪಾಂತರ ಪತ್ತೆಯಾಗಿರುವ ದೇಶಗಳನ್ನು ಅಪಾಯದಲ್ಲಿರುವ ರಾಷ್ಟ್ರಗಳ ವರ್ಗದಲ್ಲಿರಿಸಲಾಗಿದೆ.

ಈ ಕಳವಳಕಾರಿ ರೂಪಾಂತರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ತೀವ್ರ ನಿಯಂತ್ರಣ,ಸಕ್ರಿಯ ಕಣ್ಗಾವಲು, ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ಮತ್ತು ಕೋವಿಡ್ ಸೂಕ್ತ ಶಿಷ್ಟಾಚಾರಗಳನ್ನು ಪೂರ್ವನಿಯಾಮಕ ಕ್ರಮದಲ್ಲಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಅಂತರರಾಷ್ಟ್ರೀಯ ವಿಮಾನಯಾನಗಳ ಮೂಲಕ ಆಗಮಿಸುವ ಪ್ರಯಾಣಿಕರ ಹಿಂದಿನ ಪ್ರಯಾಣ ವಿವರಗಳನ್ನು ಪಡೆದುಕೊಳ್ಳಲು ವರದಿಗಾರಿಕೆ ಕಾರ್ಯವಿಧಾನವು ಈಗಾಗಲೇ ಅಸ್ತಿತ್ವದಲ್ಲಿದ್ದು, ರಾಜ್ಯಗಳು ತಮ್ಮ ಮಟ್ಟದಲ್ಲಿ ಇದನ್ನು ಪುನರ್‌ಪರಿಶೀಲಿಸಬೇಕು ಎಂದು ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ.

ಈ ರೂಪಾಂತರಿತ ವೈರಸ್‌ನಿಂದ ಸಾಂಕ್ರಾಮಿಕವು ಉಲ್ಬಣಗೊಳ್ಳುವುದನ್ನು ತಡೆಯಲು ಸಾಕಷು ಪರೀಕ್ಷಾ ಮೂಲಸೌಕರ್ಯವನ್ನು ಕಾರ್ಯಗತಗೊಳಿಸಬೇಕಿದೆ. ಕೆಲವು ರಾಜ್ಯಗಳಲ್ಲಿ ಒಟ್ಟಾರೆ ಪರೀಕ್ಷೆಗಳು ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣ ಇಳಿಕೆಯಾಗಿರುವುದನ್ನು ಗಮನಿಸಲಾಗಿದೆ. ಸಾಕಷ್ಟು ಪರೀಕ್ಷೆಗಳ ಅನುಪಸ್ಥಿತಿಯಲ್ಲಿ ಸಾಂಕ್ರಾಮಿಕದ ಹರಡುವಿಕೆಯ ನಿಜವಾದ ಮಟ್ಟವನ್ನು ನಿರ್ಧರಿಸುವುದು ಅತ್ಯಂತ ಕಠಿಣವಾಗುತ್ತದೆ ಎಂದು ಹೇಳಿರುವ ಆರೋಗ್ಯ ಸಚಿವಾಲಯವು,ಇತ್ತೀಚಿಗೆ ಹಲವಾರು ಪಾಸಿಟವ್ ಪ್ರಕರಣಗಳು ವರದಿಯಾಗಿರುವ ಹಾಟ್‌ಸ್ಪಾಟ್‌ಗಳ ಮೇಲೆ ನಿರಂತರ ನಿಗಾಯಿರಿಸಬೇಕು. ಹಾಟ್‌ಸ್ಪಾಟ್‌ಗಳಲ್ಲಿ ಸ್ಯಾಚ್ಯುರೇಶನ್ ಟೆಸ್ಟಿಂಗ್ ಅಗತ್ಯವಾಗಿದೆ ಮತ್ತು ಎಲ್ಲ ಪಾಸಿಟಿವ್ ಸ್ಯಾಂಪಲ್‌ಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ನಿಯೋಜಿತ ಲ್ಯಾಬ್‌ಗಳಿಗೆ ಕಳುಹಿಸಬೇಕು ಎಂದು ತಿಳಿಸಿದೆ.

 ರಾಜ್ಯಗಳು ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರವನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು ಮತ್ತು ಇದೇ ವೇಳೆ ಸೋಂಕನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ನೆರವಾಗಲು ಪರೀಕ್ಷೆಗಳು ಮತ್ತು ಆರ್‌ಟಿ-ಪಿಸಿಆರ್ ಟೆಸ್ಟ್‌ಗಳ ಪ್ರಮಾಣವನ್ನು ಹೆಚ್ಚಿಸಲು ಗಮನವನ್ನು ಕೇಂದ್ರೀಕರಿಸಬೇಕು ಎಂದು ತಿಳಿಸಿರುವ ಹೇಳಿಕೆಯು, ಚಿಕಿತ್ಸೆಯನ್ನು ಒದಗಿಸುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ ಸಾಕಷ್ಟು ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ಹೊಂದಿರುವುದು ಅಗತ್ಯವಾಗಿದೆ. ಸರಕಾರವು ಒದಗಿಸುವ ಹಣಕಾಸು ನೆರವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ರಾಜ್ಯಗಳನ್ನು ಕೋರಲಾಗಿದೆ ಎಂದು ಹೇಳಿದೆ.

ದೇಶದಲ್ಲಿ ಪ್ರಸಾರದಲ್ಲಿರುವ ರೂಪಾಂತರಿಗಳ ಮೇಲೆ ನಿಗಾಯಿರಿಸಲು ಇಂಡಿಯನ್ ಸಾರ್ಸ್-ಕೋವ್-2 ಜೆನೊಮಿಕ್ಸ್ ಕನ್ಸಾರ್ಟಿಯಂ ಅನ್ನು ಸ್ಥಾಪಿಸಲಾಗಿದೆ. ಈ ಹಂತದಲ್ಲಿ ರಾಜ್ಯಗಳು ಜನಸಾಮಾನ್ಯರಿಂದ ಸ್ಯಾಂಪಲ್‌ಗಳ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ತಪ್ಪು ಮಾಹಿತಿಗಳಿಂದ ಜನರಲ್ಲಿ ಉಂಟಾಗಬಹುದಾದ ಆತಂಕಗಳನ್ನು ನಿವಾರಿಸಲು ಎಲ್ಲ ರಾಜ್ಯಗಳು ನಿಯಮಿತವಾಗಿ ಸುದ್ದಿಗೋಷ್ಠಿಗಳನ್ನು ನಡೆಸಬೇಕು ಮತ್ತು ಬುಲೆಟಿನ್‌ಗಳನ್ನು ಹೊರಡಿಸಬೇಕು ಎಂದೂ ಅದು ಸೂಚಿಸಿದೆ.

ಕಳೆದ ವಾರ ದ.ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಒಮಿಕ್ರಾನ್ ತಳಿಯು ಬಳಿಕ ಬ್ರಿಟನ್, ಜರ್ಮನಿ, ಇಟಲಿ, ಬೆಲ್ಜಿಯಂ, ಆಸ್ಟ್ರಿಯಾ, ಬೋಟ್ಸ್‌ವಾನಾ,  ಇಸ್ರೇಲ್ ಮತ್ತು ಹಾಂಗ್‌ಕಾಂಗ್‌ಗಳಲ್ಲಿಯೂ ಪತ್ತೆಯಾಗಿದೆ. ಒಮಿಕ್ರಾನ್ ಲಸಿಕೆಗಳನ್ನು ಪ್ರತಿರೋಧಿಸಬಹುದು ಮತ್ತು ಕೋವಿಡ್ ಸಾಂಕ್ರಾಮಿಕದ ಅವಧಿಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬ ಆತಂಕಗಳು ವಿಶ್ವಾದ್ಯಂತ ಸೃಷ್ಟಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News