ಮಂಗಳೂರು; ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ-ಅತ್ಯಾಚಾರ ಪ್ರಕರಣ: ಆರೋಪಿಗೆ 7 ವರ್ಷಗಳ ಕಠಿಣ ಶಿಕ್ಷೆ

Update: 2021-11-29 13:14 GMT

ಮಂಗಳೂರು, ನ.29: ಸುಮಾರು 7 ವರ್ಷಗಳ ಹಿಂದೆ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿ ಯುವಕನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ- 1 ನ್ಯಾಯಾಲಯದ ನ್ಯಾಯಾಧೀಶರು 7 ವರ್ಷಗಳ ಕಠಿಣ ಸಜೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.

ಮಂಗಳೂರು ತಾಲೂಕಿನ ಕೋಟೆಕಾರು ಗ್ರಾಮದ ದೇರಳಕಟ್ಟೆ ಸಮೀಪದ ಇರ್ಫಾನ್ (28) ಶಿಕ್ಷಿಗೊಳಗಾದ ಯುವಕ. 2014ರಲ್ಲಿ ಈತ ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್‌ನಲ್ಲಿ ಅಕ್ರಮವಾಗಿ ಕೂಡಿ ಹಾಕಿ ಅತ್ಯಾಚಾರವೆಸಗಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇರ್ಫಾನ್ ಸಂತ್ರಸ್ತೆಯ ಪರಿಚಯ ಮಾಡಿಕೊಂಡು ಪ್ರೀತಿ-ಪ್ರೇಮದ ಹೆಸರಿನಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ. ಅಲ್ಲದೆ ಮದುವೆಯಾಗಬೇಕು ಎಂದು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. 2014ರ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ದೇರಳಕಟ್ಟೆ ಸಮೀಪದ ನಾಟೆಕಲ್‌ನಲ್ಲಿ ತಡೆದು ನಿಲ್ಲಿಸಿ ಕಾರಿನಲ್ಲಿ ಅಪಹರಿಸಿ ಚಿಕ್ಕಮಗಳೂರಿನ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆಗಿನ ಉಳ್ಳಾಲ ಇನ್‌ಸ್ಪೆಕ್ಟರ್ ಸವಿತ್ರ ತೇಜ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ವಿಚಾರಣೆ ನಡೆಸಿ ಪೂರಕ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಯ ಅಪರಾಧ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ.

ಅಪಹರಣ ಕೃತ್ಯಕ್ಕೆ ಐಪಿಸಿ ಕಲಂ 366(ಎ)ನಡಿ 3 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 15 ದಿನ ಹೆಚ್ಚುವರಿ ಕಠಿಣ ಸಜೆ, ತಡೆದು ನಿಲ್ಲಿಸಿದ ಕೃತ್ಯಕ್ಕೆ ಐಪಿಸಿ 342 ಕಲಂನಡಿ 5 ತಿಂಗಳು ಕಠಿಣ ಸಜೆ ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಮತ್ತೆ 15 ದಿನ ಕಠಿಣ ಸಜೆ, ಕೊಲೆ ಬೆದರಿಕೆಯೊಡ್ಡಿರುವುದಕ್ಕೆ ಐಪಿಸಿ 506ರಡಿ 1 ವರ್ಷ ಕಠಿಣ ಸಜೆ ಮತ್ತು 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳು ಕಠಿಣ ಸಜೆ, ಅಪ್ರಾಪ್ತೆಯ ಮೇಲಿನ ಅತ್ಯಾಚಾರಕ್ಕೆ ಪೊಕ್ಸೊ ಕಾಯ್ದೆ ಕಲಂ 4ರ ಅಡಿ ಹಾಗೂ ಐಪಿಸಿ ಕಲಂ 376ರಡಿ 7 ವರ್ಷ ಕಠಿಣ ಸಜೆ ಮತ್ತು 15,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಕಠಿಣ ಸಜೆ ವಿಧಿಸಿದ್ದಾರೆ.

ಸಂತ್ರಸ್ತೆ ಮತ್ತು ಆಕೆಯ ಮನೆಯವರು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನುಡಿದಿದ್ದರು. ಆದರೆ ನ್ಯಾಯಾಲಯವು ತನಿಖಾಧಿಕಾರಿಗಳು, ಸಾಂದರ್ಭಿಕ ಸಾಕ್ಷಿದಾರರು ಮತ್ತು ವೈದ್ಯಾಧಿಕಾರಿಗಳ ಸಾಕ್ಷವನ್ನು ಪರಿಗಣಿಸಿದ ಹಿನ್ನೆಲೆಯಲ್ಲಿ ಅಪರಾಧ ಸಾಬೀತಾಗಿದೆ. 15 ಮಂದಿ ಸಾಕ್ಷಿದಾರರ ಸಾಕ್ಷ್ಯ ಮತ್ತು 22 ದಾಖಲೆಗಳ ಸಾಕ್ಷ್ಯವನ್ನು ದಾಖಲು ಮಾಡಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News