ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಜಾರಿಗೊಳಿಸಿ: ಡಿಸಿ ಕೂರ್ಮಾರಾವ್

Update: 2021-11-29 16:02 GMT

ಉಡುಪಿ, ನ.29: ತುರ್ತು ವಿಪತ್ತು ನಿರ್ವಹಣಾ ಕಾರ್ಯಗಳನ್ನು ಎದುರಿಸಲು ಅನುಕೂಲವಾಗುವ ರೀತಿಯಲ್ಲಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ನಕ್ಷೆಯನ್ನು ಒಳಗೊಂಡಂತೆ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ಅತ್ಯಾವಶ್ಯಕ ಸೌಲಭ್ಯಗಳ ಮಾಹಿತಿ ಒಂದೇ ಕಡೆ ದೊರೆಯುವಂತೆ ಮಾಹಿತಿಗಳು ಕ್ರೂಡೀಕೃತವಾಗಿ ಲಭ್ಯವಿದ್ದಲ್ಲಿ, ಯಾವುದೇ ರೀತಿಯ ವಿಳಂಬಲ್ಲದೇ ಗೊಂದಲಕ್ಕೆ ಅವಕಾಶ ನೀಡದೇ ನಿರ್ವಹಣಾ ಕಾರ್ಯಗಳನ್ನು ಮಾಲು ಅನುಕೂಲವಾಗುತ್ತದೆ ಎಂದರು.

ಮಳೆ, ಪ್ರವಾಹ ಸೇರಿದಂತೆ ಇತರ ತುರ್ತು ಸಂದರ್ಭಗಳಲ್ಲಿ ಅಂಥಾ ಪ್ರದೇಶಗಳಿಗೆ ಹೋಗಲು ಸೂಕ್ತ ರಸ್ತೆ ಸೌಲಭ್ಯ, ಹತ್ತಿರದ ಆಸ್ಪತ್ರೆ, ಸಂಬಂದಪಟ್ಟ ವೈದ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಮೊಬೈಲ್ ಸಂಖ್ಯೆ, ಅಂಬುಲೆನ್ಸ್ ಲಭ್ಯತೆ, ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವ ಸ್ಥಳ ಗುರುತಿಸುವಿಕೆ ಮತ್ತಿತರ ಸೌಲಭ್ಯಗಳ ಮಾಹಿತಿಗಳನ್ನು ಕ್ರೂಢೀಕರಿಸುವುದು ಅವಶ್ಯಕ ಎಂದರು.

ಕಳೆದ 3 ತಿಂಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿದ್ದು, ಇದರಿಂದಾಗಿ ಉಂಟಾದ ಹಾನಿಯ ಮಾಹಿತಿಗಳನ್ನೊಳಗೊಂಡ ಇಲಾಖಾವಾರು ವರದಿಯನ್ನು ಶೀಘ್ರದಲ್ಲಿಯೇ ನೀಡಬೇಕೆಂದು ಜಿಲ್ಲಾದಿಕಾರಿ ಸೂಚನೆ ನೀಡಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸ್ವಯಂ ಸೇವಕರನ್ನು ಗುರುತಿಸುವು ದರೊಂದಿಗೆ ಅವರಿಗೆ ವಿಪತ್ತು ನಿರ್ವಹಣೆ ಕುರಿತು ತರಬೇತಿ ನೀಡುವುದರ ಜೊತೆಗೆ ತುರ್ತು ಸುರಕ್ಷಾ ಕಿಟ್‌ಗಳನ್ನು ನೀಡಬೇಕೆಂದು ಸಲಹೆ ನೀಡಿದರು.

ಪ್ರಸ್ತುತ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಕಟ್ಟಡ, ಸೇರಿದಂತೆ ಹಾನಿಗೊಳಗಾದ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿದ್ದು, ಅವುಗಳನ್ನು ಅತಿಶೀಘ್ರದಲ್ಲಿಯೇ ಪೂರ್ಣ ಗೊಳಿಸಬೇಕೆಂದು ಸೂಚನೆ ನೀಡಿದರು.

ಆಯ್ದ ಸ್ಥಳಗಳಲ್ಲಿ ಸೈರನ್ ಅಳವಡಿಸುವುದು ಸೇರಿದಂತೆ ಡಿಜಿಟಲ್ ಮೊಬೈಲ್ ರೇಡಿಯೋ ಟವರ್ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ತಕ್ಷಣವೇ ನಿರಾಪೇಕ್ಷಣಾ ಪತ್ರವನ್ನು ಪಡೆದು ನಿರ್ಮಾಣ ಕಾರ್ಯಗಳನ್ನು ಆದಷ್ಟು ಬೇಗ ಕೈಗೊಳ್ಳಬೇಕೆಂದು ಅವರು ನಿರ್ದೇಶನಗಳನ್ನು ನೀಡಿದರು.

ಕೋವಿಡ್ ಸೋಂಕು ನಿಯಂತ್ರಣ ಸೇರಿದಂತೆ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ ಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿ ತಪಾಸಣೆ ನಡೆಸುವಂತೆ ಹಾಗೂ ಕೋವಿಡ್ ಪರೀಕ್ಷೆಗೆ ನರ್ಸಿಂಗ್ ವಿದ್ಯಾರ್ಥಿಗಳ ನೆರವು ಪಡೆದುಕೊಳ್ಳಲು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್‌ಭಟ್, ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಕುಂದಾಪುರ ಉಪಭಾಗಾಧಿಕಾರಿ ರಾಜು ಹಾಗೂ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News