ಮಂಗಳೂರು; ಬೈಕ್ ಸವಾರನ ಸುಲಿಗೆ ಪ್ರಕರಣ : ಮಂಗಳಮುಖಿಯ ಬಂಧನ

Update: 2021-11-29 17:56 GMT
ಅಭಿಷೇಕ್

ಮಂಗಳೂರು, ನ.29: ನಗರದ ನಂತೂರು ಸಮೀಪ ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಚಿನ್ನದ ಸರವನ್ನು ಸುಲಿಗೆಗೈದ ಮಂಗಳಮುಖಿಯನ್ನು ಕದ್ರಿ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮೂಲತಃ ಮೈಸೂರಿನ ಪ್ರಸ್ತುತ ಬೆಂಗಳೂರಿನ ನಿವಾಸಿ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ (27) ಬಂಧಿತ ಆರೋಪಿಯಾಗಿದ್ದು, ಈ ಮಂಗಳಮುಖಿಯಿಂದ ಸುಮಾರು 71 ಗ್ರಾಂ ತೂಕದ 3 ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಣೇಶ್ ಶೆಟ್ಟಿ ಎಂಬವರು ಎರಡು ತಿಂಗಳ ಹಿಂದೆ ತನ್ನ ಬೈಕ್‌ನಲ್ಲಿ ನಂತೂರು ಪದವಿನಿಂದ ಬಿಎಸ್‌ಎನ್‌ಎಲ್ ಎಕ್ಸೇಂಜ್ ಬಳಿಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಠಾತ್ ಆಗಿ ಅಡ್ಡ ಬಂದ ಮಂಗಳಮುಖಿ ಗಣೇಶ್ ಶೆಟ್ಟಿಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 24 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಮಾಡಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದಾಗ ಆರೋಪಿ ಮಂಗಳಮುಖಿಯು ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸೋಮವಾರ ಬೆಂಗಳೂರಿನಿಂದ ಆರೋಪಿಯನ್ನು ಬಂಧಿಸಿ ಮಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News