ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ 'ಕರುನಾಡ ಸಂಭ್ರಮ-2021' ಕಾರ್ಯಕ್ರಮ

Update: 2021-11-30 11:18 GMT

ರಿಯಾದ್ : ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕರುನಾಡ ಸಂಭ್ರಮ-2021” ಕುಟುಂಬ ಸಮ್ಮಿಲನ ಕಾರ್ಯಕ್ರಮವು ರಿಯಾದ್ ನ ವಾಹತ್ ಅಲ್ ರಿಯಾದ್ ಫಾರ್ಮ್ ಹೌಸ್ ನಲ್ಲಿ ಇತ್ತೀಚೆಗೆ ನಡೆಯಿತು.

ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ ಮಾತನಾಡಿದ ಅವರು, ಇಂಡಿಯನ್ ಸೋಶಿಯಲ್ ಫೋರಂ ನಡೆಸುತ್ತಿರುವ ಸಾಮಾಜಿಕ ಸೇವೆಯನ್ನು ಹಾಗು ಸಂಘಟನೆಯ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿಯ ಅಧ್ಯಕ್ಷ ಬಶೀರ್ ಕಾರಂದೂರು ಉದ್ಘಾಟಿಸಿದರು.

ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಮೊಹಮ್ಮದ್ ನವೀದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ರಿಯಾದ್ ನ ಅಧ್ಯಕ್ಷ ತಾಜುದ್ದೀನ್ ಪುತ್ತೂರು, ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿ ಉಪಾಧ್ಯಕ್ಷ ಮುಸ್ತಾಕ್ ಕಸಮ್, ಖಿದ್ಮ ಫೌಂಡೇಶನ್ ನ ಅಧ್ಯಕ್ಷ ಫಝ್ಲು ರೆಹ್ಮಾನ್, ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಜಿ.ಕೆ. ಶೇಕ್, ಮಲೆನಾಡು ಎಜುಕೇಷನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ನಝೀರ್ ಮಡತಿಲ್, ಬಸ್ರುರು ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಹನೀಫ್ ಬಸ್ರುರು, ರಿಯಾದ್ ಮೊಬೈಲ್ ಮೆಡಿಕಲ್ ಟೀಮ್ ನ (ಅರೋಗ್ಯ ಸಚಿವಾಲಯ) ಮುಖ್ಯಸ್ಥ ಡಾ. ಕೈಸರ್ ಪರ್ವೇಝ್ ಮತ್ತು ಹಿದಾಯ ಫೌಂಡೇಶನ್ ನ ಅಧ್ಯಕ್ಷ ಮೊಹಮ್ಮದ್ ಅಲಿ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜಿಪ ಸ್ವಾಗತಿಸಿದರೆ, ರಾಜ್ಯ ಸಮಿತಿ ಕಾರ್ಯದರ್ಶಿ ಜವಾದ್ ಬಸ್ರುರು ವಂದಿಸಿದರು. ಶರೀಫ್ ಕಬಕ ಕಾರ್ಯಕ್ರಮ ನಿರೂಪಿಸಿದರು.

“ನಮ್ಮ ಬದುಕು ನಮ್ಮ ಹೆಮ್ಮೆ” ಎಂಬ ಕಿರು ಹಾಸ್ಯ ಪ್ರಹಸನವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಅಳಿದು ಹೋದ ಇತಿಹಾಸವನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಭಾರತದ ಸುವರ್ಣ ಇತಿಹಾಸದ 3D ಎಕ್ಸ್ಪೋ (EXPO) ಸಭಿಕರನ್ನು ಮತ್ತೊಮ್ಮೆ ಐತಿಹಾಸಿಕ ಲೋಕಕ್ಕೆ ಕೊಂಡೊಯಿತು. ಪುರುಷರು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟ ಹಾಗು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಮಂಗಳೂರಿನ ಕೋಮ್ ಕ್ವೆಸ್ಟ್ ಸೊಲ್ಯೂಶನ್ ವತಿಯಿಂದ ನಡೆದ ಅದೃಷ್ಠದ ಲಕ್ಕಿಕೂಪನ್ ಡ್ರಾನಲ್ಲಿ 10 ಅದೃಷ್ಠಶಾಲಿಗಳಿಗೆ ವಂಡರ್ಲಾಗೆ ಉಚಿತ ಟಿಕೇಟ್ ನೀಡಲಾಯಿತು.

ಸಾಕಷ್ಟು ಕುತೂಹಲ ಕೆರಳಿಸಿದ ಹಗ್ಗ ಜಗ್ಗಾಟ  ಫೈನಲ್ ಹಣಾಹಣಿಯಲ್ಲಿ ಮಲಝ್ ಗೈಸ್ ತಂಡವನ್ನು ಸೋಲಿಸುವುದರ ಮೂಲಕ ಬಂಟ್ವಾಳ ಗೈಸ್ ಕರುನಾಡ ಸಂಭ್ರಮ-2021 ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕ್ರಿಕೆಟ್ ಪಂದ್ಯಾಟದಲ್ಲಿ ಲಗಾನ್ ಕ್ರಿಕೆಟರ್ಸ್ ತಂಡವು ವಿಜಯಿಯಾಗಿ, ಬಂಟ್ವಾಳ ಗೈಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News