ಕೇರಳ: ಪ್ರಚೋದನಾಕಾರಿ ಭಾಷಣ; ಬಿಜೆಪಿ ನಾಯಕನ ಬಂಧನ
Update: 2021-12-04 00:12 IST
ಅರಿಯಲೂರು , ಡಿ. 3: ಜಿಲ್ಲಾಧಿಕಾರಿ ಕಚೇರಿ ಎದುರು ಡಿಸೆಂಬರ್ 1ರಂದು ಪ್ರತಿಭಟನೆ ಸಂದರ್ಭ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಅಯ್ಯಪ್ಪನ್ ಅವರನ್ನು ಅಲಿಯೂರಿನಲ್ಲಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಇಳಿಕೆ ಮಾಡುವಂತೆ ಆಗ್ರಹಿಸಿ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯ ನೇತೃತ್ವವನ್ನು ಅಯ್ಯಪ್ಪನ್ ವಹಿಸಿದ್ದರು. ಭಾಷಣದ ವೇಳೆ ಅವರು ಸರಕಾರದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
‘‘ರಾಜ್ಯ ಸರಕಾರ ತೈಲ ತೆರಿಗೆಯನ್ನು ಕಡಿತಗೊಳಿಸಲು ವಿಫಲವಾದರೆ, ನಮ್ಮ ರಾಜ್ಯಾಧ್ಯಕ್ಷರ ಆದೇಶದಂತೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧರಾಗಿದ್ದೇವೆ’’ ಎಂದು ಅವರು ಹೇಳಿದ್ದರು. ಈ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಲಾಜಾಹ್ ನಗರದ ವಿಎಒ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಪೊಲೀಸರು ಅಯ್ಯಪ್ಪನ್ನು ಜಯನಕೊಂಡಂನಲ್ಲಿರುವ ಅವರ ನಿವಾಸದಿಂದ ಬಂಧಿಸಿದರು.