ಬಿಜೆಪಿ ಎಂದರೆ ಬಿಜಿನೆಸ್ ಪಾರ್ಟಿ : ಮಧುಬಂಗಾರಪ್ಪ ಆರೋಪ
ಭಟ್ಕಳ: ಭಾರತೀಯ ಜನತಾ ಪಕ್ಷವನ್ನು ಇದು ಬಿಸಿನೆಸ್ ಜನರ ಪಾರ್ಟಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ. ಅಲ್ಲದೆ, ಮೋದಿ ಮತ್ತವರ ಗ್ಯಾಂಗ್ ದೇಶವನ್ನು ಕೊಳ್ಳೆ ಹೊಡೆದು ಲೂಟಿಗೈಯ್ಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಚುನಾವಣಾ ಪ್ರಚಾರಕ್ಕಾಗಿ ಶನಿವಾರ ಭಟ್ಕಳಕ್ಕೆ ಆಗಮಿಸಿದ್ದ ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರ ಎಲ್ಲಾ ಯೋಜನೆಗಳು ಬಹುತೇಕ ನಮ್ಮ ಹಣವನ್ನೇ ಬಳಸಿಕೊಂಡು ಪ್ರಚಾರಗಿಟ್ಟಿಸಿಕೊಳ್ಳುವುದಾಗಿದ್ದು, ಬೇಟಿ ಪಡಾವೋ- ಬೇಟಿ ಬಚಾವೋ, ಸ್ವಚ್ಛ ಭಾರತ ಅಭಿಯಾನದಲ್ಲಿ ಕಸ ಗುಡಿಸುವುದು, ಕಸಬಾರಿಗೆ ನಮ್ಮದು ಆದರೆ ಬ್ಯಾನರ್ ನಲ್ಲಿ ಹೆಸರು ಫೋಟೊ ಮಾತ್ರ ಮೋದಿಯವರದ್ದು. ಜನರಿಗೆ ಪ್ರಚಾರದ ಗೀಳು ಹತ್ತಿಸಿ ತಪ್ಪು ದಾರಿ ಹಿಡಿಸುವುದು ಬಿಜೆಪಿಯ ಸಿದ್ದಾಂತವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಆಸೆ ಈಡೇರಿಕೆ ಅವಕಾಶ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಭೀಮಣ್ಣ ನಾಯ್ಕ ಅವರನ್ನು ವಿಧಾನ ಸೌಧಕ್ಕೆ ಕಳುಹಿಸಬೇಕೆಂಬ ಆಸೆ ಇತ್ತು ಅದನ್ನು ಈಗ ಸಾಕಾರಗೊಳಿಸಿ ಈ ಬಾರಿಯ ಗೆಲುವಿಗೆ ಅವರು ಅರ್ಹರು ಎಂಬ ನಂಬಿಕೆ ವಿಶ್ವಾಸ ನಮಗಿದೆ ಹಾಗೂ ಅವರ ಗೆಲುವಿಗೆ ನಾವೆಲ್ಲರು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೆರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸಿಂಧೂ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಅಬ್ದುಲ್ ಮಜೀದ್, ಕಾಂಗ್ರೆಸ್ ಹಿರಿಯ ಮುಖಂಡ ಸೋಮಯ್ಯ ಗೊಂಡ, ಮುಂತಾದವರು ಉಪಸ್ಥಿತರಿದ್ದರು.