ಬ್ರಹ್ಮಾವರ: ಸರಣಿ ಅಪಘಾತಕ್ಕೆ ಓರ್ವ ಬಲಿ, ಇಬ್ಬರಿಗೆ ಗಂಭೀರ ಗಾಯ

Update: 2021-12-05 09:50 GMT

ಬ್ರಹ್ಮಾವರ, ಡಿ.5: ಕಾರು, ಮೀನು ಸಾಗಾಟದ ವಾಹನ ಹಾಗೂ ಬೈಕೊಂದರ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಾಹೇಬ್ರಕಟ್ಟೆ ಹೈಸ್ಕೂಲ್ ಸಮೀಪದ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಮೀನು ಸಾಗಾಟದ ಮಿನಿ ಪಿಕಪ್ ಚಾಲಕ, ಮಧುವನ ಅಚ್ಲಾಡಿ ನಿವಾಸಿ ಸುರೇಶ್ ಮರಕಾಲ(40) ಮೃತಪಟ್ಟವರಾಗಿದ್ದಾರೆ. ಸಹ ಸವಾರ ರಾಜು ಮರಕಾಲ(60) ಹಾಗೂ ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್(42) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರೇಶ್ ಮರಕಾಲ ಮತ್ತು ರಾಜು ಮರಕಾಲ ಪ್ರತೀ ದಿನ ಮಲ್ಪೆಯಿಂದ ಮೀನು ಖರೀದಿಸಿ ಮಿನಿ ಪಿಕಪ್ ನಲ್ಲಿ ಮಾರಾಟ ಮಾಡುತ್ತಿದ್ದರು. ಅದೇರೀತಿ ಇಂದು ಕೂಡಾ ಮಲ್ಪೆಯಿಂದ ಪಿಕಪ್ ನಲ್ಲಿ ಮೀನು ಹೇರಿಕೊಂಡು ಸಾಹೇಬ್ರಕಟ್ಟೆಗೆ ಬರುತ್ತಿದ್ದರು. ಈ ವೇಳೆ ಸ್ವಿಫ್ಟ್ ಕಾರೊಂದು ಅತೀವೇಗದಲ್ಲಿ ಬಂದು ಬೈಕ್ ಮತ್ತು ಮಿನಿ ಪಿಕಪ್ ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ಸುರೇಶ್ ಮರಕಾಲ ಮತ್ತು ರಾಜು ಮರಕಾಲ ಪಿಕಪ್ ಒಳಗಡೆ ಸಿಲುಕಿಕೊಂಡಿದ್ದರು. ಬಳಿಕ ಸ್ಥಳೀಯರು ಹರಸಾಹಸಪಟ್ಟು ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರು ಮತ್ತು ಮಿನಿ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಗಾಯಗೊಂಡ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News