ಉಡುಪಿ: ಉದ್ಯೋಗ, ಬಹುಮಾನದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
Update: 2021-12-05 16:34 GMT
ಉಡುಪಿ, ಡಿ.5: ಉದ್ಯೋಗ ಹಾಗೂ ಬಹುಮಾನ ಗೆದ್ದಿರುವುದಾಗಿ ನಂಬಿಸಿ ಯುವತಿಯಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಡ್ಸೆ ಗ್ರಾಮದ ಕೈಕಾಣದ ಬಾಲಕೃಷ್ಣ ಪೂಜಾರಿ ಎಂಬವರ ಮಗಳು ಅನುಷಾ(21) ಎಂಬವರಿಗೆ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ಏರ್ ಪೋರ್ಟ್ ನಲ್ಲಿ ಉದ್ಯೋಗ ನೀಡುವುದಾಗಿ ಇಮೇಲ್ ಸಂದೇಶವೊಂದು ಬಂದಿದ್ದು, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಅನುಷಾ ಸಂಪರ್ಕಿಸಿದ್ದರು.
ಉದ್ಯೋಗದ ಕ್ಲಿಯರೆನ್ಸ್ ಮತ್ತು ಇತರೇ ಶುಲ್ಕ ಎಂದು ಹೇಳಿ ಗೂಗಲ್ ಪೇ ಮುಖಾಂತರ 65,000 ರೂ. ಹಣವನ್ನು ಅಪರಿಚಿತ ವ್ಯಕ್ತಿಗಳ ಗೂಗಲ್ ಪೇ ಪಾವತಿಸಿದ್ದರು. ನಂತರದ ದಿನಗಳಲ್ಲಿ ಅನುಷಾಗೆ 25 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂಬುದಾಗಿ ವಾಟ್ಸ್ಅಪ್ನಲ್ಲಿ ಬಂದ ಸಂದೇಶವನ್ನು ನಂಬಿ ಅಪರಿಚಿತರ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆಗೆ ಒಟ್ಟು 5,01,540ರೂ. ಹಣವನ್ನು ಪಾವತಿಸಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.