ಮಣಿಪಾಲ; ಸ್ನೇಹಿತನ ಸುಲಿಗೆ ಪ್ರಕರಣ: ಆರೋಪಿ ಬಂಧನ

Update: 2021-12-06 14:46 GMT
ಪ್ರಶಾಂತ್

ಮಣಿಪಾಲ, ಡಿ.6: ಸ್ನೇಹಿತನಿಗೆ ಮದ್ಯ ಕುಡಿಸಿ, ಮೊಬೈಲ್, ಚಿನ್ನದ ಸರ ಹಾಗೂ ಸ್ಕೂಟರ್ ಸುಲಿಗೆ ಮಾಡಿದ ಪ್ರಕರಣದ ಆರೋಪಿಯನ್ನು ಮಣಿಪಾಲ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಪೆರಂಪಳ್ಳಿಯ ಪ್ರಶಾಂತ್ (24) ಬಂಧಿತ ಆರೋಪಿ. ಈತ ಡಿ.4 ರಂದು ರಾತ್ರಿ ಹೆರ್ಗಾದ ರಮೇಶ ಆಚಾರ್ಯ ಜೊತೆ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಮದ್ಯ ಸೇವನೆ ಮಾಡಿದ್ದು, ರಾತ್ರಿ 10:30 ಗಂಟೆಗೆ ಪ್ರಶಾಂತ್, ರಮೇಶ್ ಆಚಾರ್ಯಗೆ ಹಲ್ಲೆ ನಡೆಸಿ ಅವರಿಂದ ಮೊಬೈಲ್ ಕಿತ್ತು ಕೊಂಡಿದ್ದಾನೆ ಎಂದು ದೂರಲಾಗಿತ್ತು.

ಬಳಿಕ ಆತ ರಮೇಶ್ ಆಚಾರ್ಯರ ಕುತ್ತಿಗೆಯಲ್ಲಿದ್ದ 9 ಗ್ರಾಂ ತೂಕದ ಚಿನ್ನದ ಸರ ಹಾಗೂ ಸ್ಕೂಟರ್ ಕೀಯನ್ನು ಸುಲಿಗೆ ಮಾಡಿ ಸ್ಕೂಟರ್‌ ನೊಂದಿಗೆ ಪರಾರಿಯಾಗಿದ್ದನು. ಸುಲಿಗೆಯಾದ ಸೊತ್ತುಗಳ ಒಟ್ಟು ಮೌಲ್ಯ 70ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News