ಹೊಸದಿಲ್ಲಿ: ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್-ಪ್ರಧಾನಿ ನರೇಂದ್ರ ಮೋದಿ ಭೇಟಿ, ಮಹತ್ವದ ಮಾತುಕತೆ
ಹೊಸದಿಲ್ಲಿ,ಡಿ.6: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೋಮವಾರ ಇಲ್ಲಿ 21ನೇ ಭಾರತ-ರಷ್ಯಾ ಶೃಂಗಸಭೆಯನ್ನು ನಡೆಸಿದರು. ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ವ್ಯೆಹಾತ್ಮಕ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಹಲವಾರು ವಿಷಯಗಳನ್ನು ಉಭಯ ನಾಯಕರ ನಡುವಿನ ಮಾತುಕತೆಗಳು ಒಳಗೊಂಡಿದ್ದವು.
ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತನ್ನ ಆರಂಭಿಕ ಹೇಳಿಕೆಯಲ್ಲಿ ತಿಳಿಸಿದ ಮೋದಿ,ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ವ್ಯೆಹಾತ್ಮಕ ಪಾಲುದಾರಿಕೆಯು ಇನ್ನಷ್ಟು ಬಲಗೊಳ್ಳುತ್ತಿದೆ ಮತ್ತು ಅಫ್ಘಾನಿಸ್ತಾನದಲ್ಲಿಯ ಸ್ಥಿತಿ ಹಾಗೂ ಇತರ ವಿಷಯಗಳ ಕುರಿತು ಉಭಯ ದೇಶಗಳು ಪರಸ್ಪರ ಸಂಪರ್ಕದಲ್ಲಿವೆ ಎಂದು ಹೇಳಿದರು.
ಕಳೆದ ಕೆಲವು ದಶಕಗಳಲ್ಲಿ ಪ್ರಪಂಚವು ಹಲವಾರು ಮೂಲಭೂತ ಬದಲಾವಣೆಗಳಿಗೆ ಹಾಗೂ ವಿವಿಧ ರೀತಿಗಳ ಭೂರಾಜಕೀಯ ಸಮೀಕರಣಗಳು ಮತ್ತು ಅಸ್ಥಿರತೆಗಳಿಗೆ ಸಾಕ್ಷಿಯಾಗಿದೆ,ಆದರೆ ಭಾರತ ಮತ್ತು ರಷ್ಯಾ ನಡುವಿನ ಮೈತ್ರಿ ಸ್ಥಿರವಾಗಿದೆ ಎಂದೂ ಮೋದಿ ನುಡಿದರು.
ಇದಕ್ಕೂ ಮುನ್ನ ಉಭಯ ದೇಶಗಳ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದು,ಎಕೆ-203 ರೈಫಲ್ಗಳ ಖರೀದಿ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.