ಪುತ್ತೂರಿನ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ಉರಿಮಜಲು ರಾಮ ಭಟ್ ನಿಧನ

Update: 2021-12-06 15:57 GMT

ಪುತ್ತೂರು:ಮಾಜಿ ಶಾಸಕ, ಬಿಜೆಪಿಯ ಹಿರಿಯ ನೇತಾರ ಉರಿಮಜಲು ಕೆ. ರಾಮ ಭಟ್ (92) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಪುತ್ತೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಬಂಟ್ವಾಳ ತಾಲೂಕಿನ ಉರಿಮಜಲು ಎಂಬಲ್ಲಿ ಜನಿಸಿದ ರಾಮ ಭಟ್ ತನ್ನ ಪ್ರೌಢ ಶಿಕ್ಷಣದ ವೇಳೆಯಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು. ಬಳಿಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಅವರು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದರು. ರಾಷ್ಟ್ರೀಯ ಮಟ್ಟದ ಮುಖಂಡರಾಗಿದ್ದ ಅಟಲ್‍ ಬಿಹಾರಿ ವಾಜಪೇಯಿ, ಎಲ್‍ಕೆ ಅಡ್ವಾಣಿಯಂತಹ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಅವರು ಗ್ರಾಮ ಪಂಚಾಯತ್ ಪರಿವರ್ತಿತ ಪುತ್ತೂರು ಪುರಸಭೆಯ ಪ್ರಥಮ ಅಧ್ಯಕ್ಷರಾಗುವ ಮೂಲಕ ಪುತ್ತೂರು ಪುರಸಭೆಯಲ್ಲಿ 1972ರ ದಶಕದಲ್ಲಿ ಭಾರತೀಯ ಜನಸಂಘವನ್ನು ಅಧಿಕಾರಕ್ಕೆ ತಂದಿದ್ದರು. 1978ರಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಂದಿನ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ. ರಾಮಭಟ್ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಪುತ್ತೂರಿನ ಪ್ರಥಮ ಕಾಂಗ್ರೆಸೇತರ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. 1983ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕೆ. ರಾಮಭಟ್ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾ ಪಕ್ಷದ ಸಂಯುಕ್ತ ಅಭ್ಯರ್ಥಿಯಾಗಿ ಅಂದಿನ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ರಾಮಭಟ್ ಅವರು ಬೆಳಗಾವಿಯಲ್ಲಿ ತಮ್ಮ ಕಾನೂನು ಪದವಿಯನ್ನು ಮುಗಿಸಿದ ಬಳಿಕ ಮಂಗಳೂರಿನಲ್ಲಿ ಭಾರತೀಯ ಮಜ್ದೂರು ಸಂಘದ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ್ದರು. ಹಂಚಿನ ಕಾರ್ಖಾನೆಯ ಕಾರ್ಮಿಕರ ಸಮಸ್ಯೆಯ ಕುರಿತು ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದ ರಾಮಭಟ್ ಬಳಿಕ ರಾಜಕೀಯವಾಗಿ ಭಾರತೀಯ ಜನಸಂಘವನ್ನು ಸೇರಿದ್ದರು.

ಪುತ್ತೂರು ವಿವೇಕಾನಂದ ಕಾಲೇಜ್‍ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ ಸರ್ವ ಅಧ್ಯಕ್ಷರಾಗಿ ಸುದೀರ್ಘ ಕಾಲದ ಸೇವೆ ಸಲ್ಲಿಸಿದ್ದರು. ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧೀನ ಹಲವಾರು ಪ್ರೌಢಶಾಲೆಗಳನ್ನು ಸ್ಥಾಪಿಸುವಲ್ಲಿ ಮತ್ತು ವಿವೇಕಾನಂದ ಹೆಸರಿನ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಕೆ. ರಾಮಭಟ್ ಕಾರಣರಾಗಿದ್ದರು. 

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಕೆ. ರಾಮಭಟ್ ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಅಧೀನದಲ್ಲಿರುವ ಮಂಗಳೂರು ಹೋಬಳಿ ಹವ್ಯಕ ಸಮಿತಿಯ ಅಧ್ಯಕ್ಷರಾಗಿ ವಿವಿಧ ದೇವಾಲಯಗಳ ನವೀಕರಣದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. 
ಮೃತರು ಪತ್ನಿ ಸವಿತ ಭಟ್, ಪುತ್ರ ರವಿ ಭಟ್, ಪುತ್ರಿಯರಾದ ಜ್ಯೋತಿ ಭಟ್, ಸಂಧ್ಯಾ ಭಟ್ ಅವರನ್ನು ಅಗಲಿದ್ದಾರೆ. 

ಜನಸಂಘದ ಪ್ರಭಾವಿ ನಾಯಕರಾಗಿ, ವಕೀಲರಾಗಿ, ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರಿನ ಶಾಸಕರಾಗಿ, ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕರಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ ಮತ್ತಿತರರು ರಾಮಭಟ್ ಅವರ ಅಂತಿಮ ದರ್ಶನ ಮಾಡಿದರು.

ರಾಜಕೀಯ ಗುರುವನ್ನು ಕಳೆದುಕೊಂಡೆ: ಶಕುಂತಳಾ ಶೆಟ್ಟಿ ಕಂಬನಿ

ಹಿರಿಯರಾದ ರಾಮಭಟ್ ಅವರು ನನ್ನ ರಾಜಕೀಯ ಗುರುಗಳು. ಇದೀಗ ಅವರನ್ನು ಕಳೆದುಕೊಂಡೆ. ಜಿಲ್ಲೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಬೆಳೆಯಲು ಪ್ರಮುಖರಾದವರಲ್ಲಿ ರಾಮಭಟ್ ಒಬ್ಬರು. ಅವರ ಸಜ್ಜನಿಕೆ, ಪ್ರಾಮಾಣಿಕತೆಯ ವ್ಯಕ್ತಿತ್ವ, ಅವರ ಅಪರೂಪದ ಗುಣಗಳು ನಮಗೆ ಯಾವಾಗಲೂ ದಾರಿದೀಪವಾಗಿದೆ.

ಅವರ ಜೊತೆಗಿದ್ದ ನಮ್ಮನ್ನು ಯಾವಾಗಲೂ ದಾರಿ ತಪ್ಪದಂತೆ ನೋಡಿಕೊಂಡಿದ್ದರು. ಒಳ್ಳೆಯ ಕೆಲಸ ಮಾಡಿದಾಗ ಬೆನ್ನುತಟ್ಟುತ್ತಾ, ತಪ್ಪು ಎಂದು ಕಂಡಾಗ ತಿದ್ದುತ್ತಾ ನನ್ನನ್ನು ಬೆಳೆಸಿದ್ದರು. ನನ್ನ ರಾಜಕೀಯ ಗುರುವಾಗಿದ್ದು, ನನ್ನನ್ನು ಪುತ್ತೂರಿನಲ್ಲಿ ಶಾಸಕಿಯನ್ನಾಗಿ ಮಾಡಲು ಅವರೇ ಸೂತ್ರಧಾರಿಯಾಗಿದ್ದರು. ಅವರು ಒಮ್ಮೆ ಮಾತುಕೊಟ್ಟರೆ ಯಾವುದೇ ಸಂದರ್ಭದಲ್ಲಿಯೂ ಕೊಟ್ಟ ಮಾತು ತಪ್ಪಿದವರಲ್ಲ. ಅವರ ಅಪರೂಪದ ವ್ಯಕ್ತಿತ್ವನ್ನು ಮರೆಯಲು ಸಾಧ್ಯವಿಲ್ಲ.

- ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News