ಬಿದ್ದಲ್ಲೇ ಬೇರೂರಿದ ಕೆಂಪಮ್ಮ ಅನ್ನಪೂರ್ಣೆಯಾಗಿದ್ದು...

Update: 2021-12-08 05:59 GMT

ಬದುಕುವುದನ್ನು ಕಲಿಯಿರಿ ಎಂದು ಈಕೆ ಮಣ ಗಾತ್ರದ ಪುಸ್ತಕ ಬರೆಯಲಿಲ್ಲ. ಆಶ್ರಮ ಕಟ್ಟಿ ಫೀಸು ಕೇಳಲಿಲ್ಲ. ಬಿದ್ದಲ್ಲೇ ಬೇರೂರಿ ಹತ್ತಾರು ಮಂದಿಯ ಬದುಕಿಗೆ ಆಸರೆಯಾಗಿ ಲಕ್ಷಾಂತರ ಮಂದಿಯ ಹಸಿವಿಗೆ ಅನ್ನ ಆದವರು ಈ ಕೆಂಪಮ್ಮ. ತಾನೂ ಬದುಕಿ ತನ್ನಂತೆಯೇ ಹಲವರನ್ನು ಬದುಕಿಸಿದ ಕೆಂಪಮ್ಮರಿಗೆ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್, ಕೋರ್ಟುಗಳಲ್ಲಿ ಅಧಿಕಾರಿಗಳು, ಮಂತ್ರಿಗಳು, ವಕೀಲರು, ಪೊಲೀಸರು ಅನ್ನಪೂರ್ಣೆ ಅಂತಲೇ ಕರೆಯೋದು. ಮಧ್ಯಾಹ್ನ 12 ಗಂಟೆಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಎದುರಿನ ಹತ್ತಾರು ಕಚೇರಿಗಳು ಹಾಗೂ ಹೈಕೋರ್ಟ್ ಮತ್ತು ಸೆಷನ್ ಕೋರ್ಟ್ ಗಳಿಂದ ದೊಡ್ಡ ದೊಡ್ಡ ಖಾಲಿ ಕ್ಯಾರಿಯರ್‌ಗಳು ಮೊವಣಿಗೆ ಹೊರಡುತ್ತವೆ. ಇವೆಲ್ಲಾ ಬಂದು ಜಮೆ ಆಗುವುದು ಲೋಕೋಪಯೋಗಿ ಇಲಾಖೆಯ ಆವರಣದ ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ಪಕ್ಕದ ಖಾಲಿ ಜಾಗದಲ್ಲಿ. ಅಷ್ಟೊತ್ತಿಗಾಗಲೇ ಅಲ್ಲಿ ಸಾವಿರಾರು ಮಂದಿ ಅಧಿಕಾರಿಗಳು, ಪೊಲೀಸರು, ವಕೀಲರು ಮತ್ತು ಕೂಲಿಗಳು, ಕಾಸಿಲ್ಲದ ಮಾಸಿದ ಬಟ್ಟೆಯವರು, ಮಂಗಳಮುಖಿಯರು ಸಾಲು ಗಟ್ಟಿರುತ್ತಾರೆ.

ಬಿಸಿ ಬಿಸಿ ಮುದ್ದೆ, ಸೊಪ್ಪು, ಕಾಳಿನ ಸಾರು, ಹುರುಳಿಕಾಳಿನ ಹಪ್ಪ, ಹೋಳಿಗೆ, ವಡೆ, ಬೋಂಡಾ, ಬಜ್ಜಿ, ಪಲ್ಯ, ಮೂರು ರೀತಿಯ ಅನ್ನದ ಐಟಂ ಜತೆಗೆ ತರಹೇವಾರಿ ಐಟಂಗಳು ಸಾಲು ಗಟ್ಟಿದವರ ಕೈಯಲ್ಲಿ ಹಿಡಿದ ತಟ್ಟೆಗಳಲ್ಲಿ ಜಾಗ ಮಾಡಿಕೊಂಡಿರುತ್ತವೆ. ಪೌಷ್ಠಿಕಾಂಶ ತುಂಬಿದ, ಸೋಡಾ ಬೆರೆಸದ ಹೊಟ್ಟೆ ತುಂಬ ಊಟಕ್ಕೆ ಬರೀ 35-40 ರೂಪಾಯಿ. ಬೆಂಗಳೂರಿನ ಹೋಟೆಲ್- ದರ್ಶಿನಿಗಳಿಂದ ಮೊಳಕೆ ಕಾಳುಗಳು, ತರಕಾರಿ, ಸೊಗಸಾದ ಸೊಪ್ಪಿನ ಪಲ್ಯಗಳೆಲ್ಲಾ ನಾಪತ್ತೆಯಾಗಿ ವರ್ಷಗಳೇ ಕಳೆದಿವೆ. ಆದರೆ ಎಲ್ಲವೂ ಒಂದೇ ಕಡೆ ರುಚಿಕಟ್ಟಾಗಿ ಸಿಗುವುದು ಈ ಕೆಂಪಮ್ಮನ ಅನ್ನಪೂರ್ಣ ಕ್ಯಾಂಟೀನ್‌ನಲ್ಲಿ.

ಈ ಕೆಂಪಮ್ಮನ ಕೈ ರುಚಿಯ ಕಮಾಲು ಏನು ಗೊತ್ತಾ? ವಿಧಾನಸೌಧದ ಐಎಎಸ್, ಕೆಎಎಸ್ ಅಧಿಕಾರಿಗಳು, ನಾನಾ ಇಲಾಖೆಯ ಉನ್ನತ ಹಂತದ ಅಧಿಕಾರಿಗಳು ಮತ್ತು ಅದೇ ಇಲಾಖೆಯ ಡಿ ಗ್ರೂಪ್ ನೌಕರರವರೆಗೂ ಎಲ್ಲರೂ ಸ್ಥಾನಮಾನದ ಹುಸಿ ಹಂಗು ತೊರೆದು ಬೆರಳು ಚಪ್ಪರಿಸಿ ಊಟ ಮಾಡುವಂತೆ ಮಾಡಿರುವುದು. ಮುಖ್ಯ ವಿಷಯ ಇದಲ್ಲ. ಅನ್ನ ಹುಡುಕಿಕೊಂಡು ರಾಜಧಾನಿ ಬೆಂಗಳೂರಿಗೆ ಬಂದು ಬೀದಿಗೆ ಬೀಳುವವರು ಹಲವರು. ಆದರೆ ಬಿದ್ದಲ್ಲೇ ಬೇರೂರಿ ಅನ್ನ ಹುಟ್ಟಿಸಿಕೊಂಡು ತನ್ನಂತೆಯೇ ಹಲವರ ಅನ್ನಕ್ಕೆ ದಾರಿ ಆಗುವವರು ಕೆಲವರು. ಕೆಂಪಮ್ಮ ಈ ಕೆಲವರ ಸಾಲಿಗೆ ಸೇರುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಮರದ ಕೆಳಗೆ ತಳ್ಳುವ ಗಾಡಿಯಲ್ಲಿ ಮುದ್ದೆ ತಿರುವುತ್ತಾ 2 ರೂಪಾಯಿಗೆ ಊಟ ಮಾರಾಟ ಮಾಡುತ್ತಿದ್ದ ಕೆಂಪಮ್ಮ ಹತ್ತಾರು ಮಂದಿಗೆ ಊಟ ಮಾರಿ ತಾವು ಉಪವಾಸ ಮಲಗಿದ್ದಿದೆ. ಆದರೆ ಬದುಕುವ ಹಠ, ಕೆಲಸದ ಶ್ರದ್ದೆಯನ್ನು ಕೈ ಬಿಡಲಿಲ್ಲ. ಹಲವರು ಕೊಡುತ್ತಿದ್ದ ನಿತ್ಯ ಕಾಟದಿಂದಲೂ ಎದೆಗುಂದಲಿಲ್ಲ. ಕೆಂಪಮ್ಮನ ಕೈ ರುಚಿ ಉಂಡ ಒಂದಿಬ್ಬರು ಪುಣ್ಯಾತ್ಮರು ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಖಾಲಿ ಜಾಗ ಕೊಡಿಸಿ ಅನ್ನದ ಋಣ ತೀರಿಸಿದರು. ಆ ಜಾಗಕ್ಕೆ ತಗಡು ಶೀಟ್‌ಗಳನ್ನು ಅಂಟಿಸಿ ಅದೇ ಜಾಗದಲ್ಲಿ ನಿತ್ಯ ಸಾವಿರಾರು ಮಂದಿಗೆ ಊಟ ಕೊಡುತ್ತಿದ್ದಾರೆ ಕೆಂಪಮ್ಮ. ಅತ್ಯಂತ ಉನ್ನತ ಸ್ಥಾನದಲ್ಲಿರುವವರಿಂದ ಹಿಡಿದು, ಸಾಮಾನ್ಯ ವರ್ಗದವರೂ ಒಂದೇ ಕಡೆ ನಿಲ್ಲುವಂತೆ ಮಾಡಿದ ಅನ್ನಪೂರ್ಣ ಕ್ಯಾಂಟೀನ್‌ನಲ್ಲಿ ಒಟ್ಟು 36 ಮಂದಿ ಕೆಲಸ ಮಾಡುತ್ತಾರೆ. ಇವರೆಲ್ಲರ ಸಂಸಾರಗಳೂ ತಗಡಿನ ಶೀಟ್‌ಗಳ ಅಡಿಯಲ್ಲೇ ಬೇರು ಬಿಟ್ಟಿವೆ.

ಹಸಿವು ಮತ್ತು ಖಾಲಿ ಹೊಟ್ಟೆಯ ಸಂಕಟವನ್ನೇ ವರ್ಷಗಟ್ಟಲೆ ಅನುಭವಿಸಿದ್ದ ಕೆಂಪಮ್ಮನ ಹೋಟೆಲ್‌ನಲ್ಲಿ ಕಾಸಿಲ್ಲ ಎಂದು ದಾಸೋಹ ಸ್ವೀಕರಿಸಿ ಹೋಗುವವರು ಇರುವ ರೀತಿಯಲ್ಲೇ ಊಟ ಮಾಡಿ ಕಾಸು ಕೊಡದೆ ವಂಚಿಸುವ ಅನುಕೂಲವಂತರೂ ಕಾಣಿಸುತ್ತಾರೆ. ಇವರು ಕಣ್ಣು ಮುಚ್ಚಿಕೊಂಡು ಹಾಲು ಕುಡಿವ ಬೆಕ್ಕುಗಳಂತೆ. ಆದರೆ ಕೆಂಪಮ್ಮನ ಗರಡಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ವಂಚಕರು ಯಾರು ಎನ್ನುವುದು ಗೊತ್ತಿರುತ್ತದೆ. ಆದರೂ ಗೊತ್ತಿಲ್ಲದವರಂತೆ ಮತ್ತೆ ಮತ್ತೆ ಅವರ ತಟ್ಟೆಗೆ ಬಡಿಸುತ್ತಾರೆ. ಹೀಗಾಗಿ ಅನ್ನಪೂರ್ಣೆ ಕೆಂಪಮ್ಮನ ಕ್ಯಾಂಟೀನ್ ಒಂದು ರೀತಿ ಅನ್ನ ದಾಸೋಹದ ತಾಣ ಆಗಿದೆ. ಆ ಕಡೆ ಹೋದಾಗ ನೀವೂ ಒಮ್ಮೆ ಬೆರಳು ಚಪ್ಪರಿಸಿ ಬನ್ನಿ.

Writer - ಗಿರೀಶ್ ಕೋಟೆ

contributor

Editor - ಗಿರೀಶ್ ಕೋಟೆ

contributor

Similar News