ಉಡುಪಿ: ನಿವೇಶನ ಹಗರಣದ ಸಂತ್ರಸ್ತರ ನಿಯೋಗದಿಂದ ಕಾಗೇರಿ ಭೇಟಿ
Update: 2021-12-11 18:35 IST
ಉಡುಪಿ, ಡಿ.11: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ನಿವೇಶನ ಹಗರಣದ ಸಂತ್ರಸ್ತರ ನಿಯೋಗವು ಡಿ.10ರಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅವರ ಶಿರಸಿಯ ಕಚೇರಿಯಲ್ಲಿ ಭೇಟಿ ಮಾಡಿತು.
ಮನವಿ ಸ್ವೀಕರಿಸಿದ ಕಾಗೇರಿ, ಹಗರಣದ ಸ್ಥೂಲ ಮಾಹಿತಿ ಪಡೆದು ಈ ಸಮಸ್ಯೆಗೆ ಪ್ರಸ್ತುತ ಅಡ್ಡಿಯಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ನೆನಗುದಿಗೆ ಬಿದ್ದಿರುವ ಎಸ್ಪಿಎಲ್ಅನ್ನು ತೆರವುಗೊಳಿಸುವ ಬಗ್ಗೆ ಸರಕಾರವನ್ನು ಒತ್ತಾಯ ಪಡಿಸುವ ಭರವಸೆ ನೀಡಿದರು.
ಉಡುಪಿಯ ಮನೆ ನಿವೇಶನ ಹಗರಣದ ಸಂತ್ರಸ್ತರ ಬವಣೆಗಳ ಬಗ್ಗೆ ಸಭಾಧ್ಯಕ್ಷರು ಅತ್ಯಂತ ಅನುಕಂಪದಿಂದ ಈ ಹಿಂದೆ ಸದನದಲ್ಲಿ ಪ್ರಸ್ತಾಪಿಸಿದ್ದರು. ಬರುವ ವಾರ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸುವ ಭರವಸೆಯನ್ನು ನೀಡಿದರು.
ಸಂತ್ರಸ್ತರ ನಿಯೋಗದಲ್ಲಿ ಭಾನುಮತಿ ಪ್ರಭು, ರಾಬರ್ಟ್ ಡಿಸೋಜ, ಯಶವಂತ ಕುಮಾರ್, ಬಾಲಚಂದ್ರ ಭಟ್, ದೇವು ಹನೆಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.