ಅನಿರೀಕ್ಷಿತ ತಿರುವುಗಳ ಆಗರ..!

Update: 2023-06-30 06:04 GMT

ಏಳು ವರ್ಷಗಳ ಹಿಂದೆ ‘ದೃಶ್ಯ’ ಸಿನೆಮಾ ತೆರೆಗೆ ಬಂದಿತ್ತು. ಅದರಲ್ಲಿ ರಾಜೇಂದ್ರ ಪೊನ್ನಪ್ಪತನ್ನ ಕುಟುಂಬವನ್ನು ಒಂದು ಅನಿರೀಕ್ಷಿತ ಕೊಲೆಯ ಅಪರಾಧದಿಂದ ರಕ್ಷಿಸುವ ನಾಯಕನ ಪ್ರಯತ್ನ ನೋಡಿದ್ದೆವು. ಮೃತದೇಹವನ್ನು ಪೊಲೀಸ್ ಸ್ಟೇಷನ್ ಅಡಿಯಲ್ಲೇ ಹೂತು ಹಾಕುವ ಮೂಲಕ ಆ ಅಧ್ಯಾಯಕ್ಕೆ ಶಾಶ್ವತ ಅಂತ್ಯ ದೊರಕಿದೆ ಎನ್ನಲಾಗಿತ್ತು. ಆದರೆ ಇದೀಗ ಭಾಗ ಎರಡು ಬಂದಿದೆ. ಕತೆ ಮತ್ತೆ ಹೇಗೆ ಮುಂದುವರಿಯುತ್ತದೆ ಎನ್ನುವುದೇ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಮುಖ ಅಂಶವಾಗಿದೆ.

ರಾಜೇಂದ್ರ ಪೊನ್ನಪ್ಪಏಳು ವರ್ಷಗಳಲ್ಲಿ ಒಂದಷ್ಟು ಸಿರಿವಂತನಾಗಿದ್ದಾನೆ. ಸಿನಿಮಾ ನಿರ್ಮಾಣ ಮಾಡಬೇಕೆನ್ನುವ ಕನಸು ಕಂಡಿದ್ದಾನೆ. ಚಿತ್ರದ ಮೊದಲಾರ್ಧದಲ್ಲಿ ಒಂದಷ್ಟು ಹೊಸ ಮುಖಗಳನ್ನು ಪರಿಚಯಿಸಲಾಗುತ್ತದೆ. ಹಾಗಾಗಿ ಕತೆ ಬೇರೆಲ್ಲೋ ಸಾಗುತ್ತಿರುವ ಅನುಭವವಾಗುತ್ತದೆ. ಆದರೆ ಮಧ್ಯಂತರದ ಹೊತ್ತಿಗೆ ಸಣ್ಣದೊಂದು ತಿರುವು ಬಂದಾಗ ಮುಂದೇನೋ ಸಂಭವಿಸಲಿದೆ ಎನ್ನುವುದರ ಸೂಚನೆ ಪ್ರೇಕ್ಷಕರಿಗೆ ದೊರಕುತ್ತದೆ. ಮೊದಲಾರ್ಧದಲ್ಲಿ ಪರಿಚಯಿಸಿದ ಪ್ರತಿಯೊಂದು ಪಾತ್ರಗಳು ಎಷ್ಟು ಪ್ರಾಮುಖ್ಯತೆ ಪಡೆದಿವೆ ಎನ್ನುವುದು ಆಗ ಅರ್ಥವಾಗುತ್ತದೆ. ಕೊನೆಯ ಒಂದು ಗಂಟೆಯಂತೂ ಪ್ರೇಕ್ಷಕರು ತಾವು ಎಲ್ಲಿದ್ದೇವೆ ಎನ್ನುವುದನ್ನೇ ಮರೆಯುವಂಥ ಸಂದರ್ಭ! ನೋಡುಗರು ರಾಜೇಂದ್ರ ಪೊನ್ನಪ್ಪನ ಕುಟುಂಬದೊಳಗೆ ಒಂದಾಗಿ ಆತನ ಆತಂಕದಲ್ಲಿ ಆತಂಕವಾಗಿ, ಬುದ್ಧಿವಂತಿಕೆಗೆ ಹೆಮ್ಮೆಯಾಗಿ, ಗೆಲುವಲ್ಲಿ ಖುಷಿಯನ್ನು ಕಾಣುತ್ತಾರೆ.

ನಾಯಕನಾಗಿ ವಿ. ರವಿಚಂದ್ರನ್ ತಮ್ಮ ಹೆಸರನ್ನು ರವಿಚಂದ್ರ ವಿ. ಎಂದು ಬದಲಾಯಿಸಿದ ಬಳಿಕ ತೆರೆ ಕಾಣುತ್ತಿರುವ ಪ್ರಥಮ ಚಿತ್ರ ಇದು. ರವಿ ಮತ್ತು ಅವರಿಗೆ ಜೋಡಿಯಾಗಿ ನಟಿಸಿರುವ ನವ್ಯಾ ನಾಯರ್ ಅವರ ಲವಲವಿಕೆ ನಮ್ಮನ್ನು ಬಹಳ ಬೇಗನೆ ‘ದೃಶ್ಯ’ದ ವಾತಾವರಣಕ್ಕೆ ಕರೆದೊಯ್ಯುತ್ತದೆ. ಮಕ್ಕಳಲ್ಲಿ ಆರೋಹಿ ನಾರಾಯಣ್ ಅವರ ಪಾತ್ರಕ್ಕೆ ಈ ಬಾರಿ ಹೆಚ್ಚು ನಟಿಸುವ ಅವಕಾಶ ದೊರಕಿದೆ. ಕೊಲೆಯಾದ ಹುಡುಗನ ತಾಯಿಯಾಗಿ ಪ್ರತಿಕಾರ ಸಾಧಿಸಲೇಬೇಕು ಎಂದು ಬರುವ ಆಶಾ ಶರತ್ ಅವರ ಅಭಿನಯ, ಅದಕ್ಕೆ ಪೂರಕವಾಗಿ ತಂತ್ರ ಹೆಣೆಯುವ ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿಗೆ ಎದುರಾಗುವ ಪರಾಜಯ ಎಲ್ಲವೂ ಹುಮ್ಮಸ್ಸು ತುಂಬಿಸುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಅನಂತ್‌ನಾಗ್ ಪಾತ್ರ ಚಿತ್ರಕ್ಕೆ ಒಂದು ತೂಕ ನೀಡಿದೆ. ಕನ್ನಡದ ಪ್ರೇಕ್ಷಕರಿಗೆ ಸಾಧುವಿನ ಹಾಸ್ಯದ ಅಗತ್ಯವಿದೆ ಎಂದು ನಿರ್ದೇಶಕರು ಅರಿತಿದ್ದಾರೆ. ಕೃಷ್ಣ ಹೆಬ್ಬಾಲೆಯವರ ಸಿಐ ಭರತ್ ಪಾತ್ರ ಗಮನಾರ್ಹವಾಗಿಲ್ಲ. ಆದರೆ ನಟ ನಾರಾಯಣ ಸ್ವಾಮಿ ತಮಗೆ ನೀಡಿರುವ ವಿಶೇಷ ಪಾತ್ರಕ್ಕೆ ಜೀವತುಂಬಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೆ ಇದೊಂದು ರಿಮೇಕ್ ಸಿನೆಮಾ. ಹಾಗಾಗಿ ಮೂಲ ಮಲಯಾಳಂ ಸಿನಿಮಾ ನೋಡಿ ಮೆಚ್ಚಿದವರಿಗೆ ಇಷ್ಟವಾಗುವುದು ಕಷ್ಟ! ಯಾಕೆಂದರೆ ಮುಖ್ಯವಾಗಿ ಅಲ್ಲಿರುವ ಪಾತ್ರಗಳ ಕ್ಲಾಸಿಕ್ ನಟನೆ ಇಲ್ಲಿಲ್ಲ. ಮಾತ್ರವಲ್ಲ ಸೀತಾರಾಮ್ ಛಾಯಾಗ್ರಾಹಕರಾಗಿದ್ದರೂ ರವಿಚಂದ್ರನ್ ಚಿತ್ರಗಳಲ್ಲಿನ ಫ್ರೇಮ್ ಕ್ವಾಲಿಟಿ ಇಲ್ಲಿ ಕಾಣಿಸದಿರುವುದು ವಿಪರ್ಯಾಸ.

ಒಬ್ಬ ಥಿಯೇಟರ್ ಮಾಲಕ, ಸಿನೆಮಾ ನಿರ್ಮಿಸಲು ಮುಂದಾಗಿರುವ ವ್ಯಕ್ತಿಯ ಮನೆಯಂತೆ ಅದು ಕಾಣಿಸುವುದಿಲ್ಲ. ಸಂಭಾಷಣೆಗಳ ಬಗ್ಗೆ ಹೇಳುವುದಾದರೆ ತಮಿಳಲ್ಲಿ ಬರೆದು ನೇರವಾಗಿ ಕನ್ನಡಕ್ಕೆ ಭಟ್ಟಿಯಿಳಿಸಿದ ಹಾಗಿದೆ! ಟ್ರೇಲರ್‌ನಲ್ಲಿಯೂ ಆಲಿಸಿರುವ ‘‘ಬ್ರಹ್ಮಾಂಡವಾದ ಸಿನೆಮಾ ಆಗಬೇಕು’’ ಎನ್ನುವ ನಾಯಕನ ಮಾತಿನಲ್ಲಿ ‘ಬ್ರಹ್ಮಾಂಡ’ದ ಅರ್ಥವೇನು ಎಂದು ನಿರ್ದೇಶಕರೇ ಹೇಳಬೇಕು! ಪೊರೆನ್ಸಿಕ್ ಲ್ಯಾಬ್ ಕುರಿತಾದ ಸಂಭಾಷಣೆಯಲ್ಲಿಯೂ ಗೊಂದಲಗಳಿವೆ. ಆದರೆ ಒಟ್ಟು ಚಿತ್ರವನ್ನು ಗಮನಿಸಿದರೆ ಮೂಲ ಚಿತ್ರಕ್ಕಿಂತ ಹೆಚ್ಚು ಸ್ಪಷ್ಟವಾಗಿ ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಆದರೂ ಸಂದೇಹಗಳು ಉಳಿದರೆ, ಕ್ಲೈಮಾಕ್ಸ್ ಅರಿತರೂ ಮತ್ತೊಮ್ಮೆ ಪೂರ್ತಿ ಚಿತ್ರವನ್ನು ನೋಡುವಂತೆ ಮಾಡುತ್ತದೆ. ಅದು ಹೊಸ ಅನುಭವವನ್ನೇ ನೀಡುವುದು ಖಚಿತ.

ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದಲ್ಲಿ ಮೂಲ ಚಿತ್ರದ ಶಬ್ದಗಳೇ ಪ್ರತಿನಿಧಿಸುತ್ತವೆ. ಆದರೆ ‘ಮಳೆಬಿಲ್ಲೇ’ ಹಾಡಿನ ಸಂಗೀತ, ಅನೂಪ್ ಭಂಡಾರಿಯ ಸಾಹಿತ್ಯ, ಹರಿಚರಣ್ ಕಂಠ ಭಾವತೀವ್ರಗೊಳಿಸುತ್ತದೆ. ಈ ಚಿತ್ರದಲ್ಲೊಂದು ಪ್ರಮುಖ ಸಂಭಾಷಣೆ ಇದೆ, ‘‘ನಾಯಕ ಗೆಲ್ಲುವುದನ್ನೇ ಎಲ್ಲರೂ ಬಯಸುತ್ತಾರೆ, ಅದಕ್ಕಾಗಿ ಆತನ ಜೊತೆಗೆ ಅದೃಷ್ಟವೂ ಸೇರಿಕೊಂಡಿದೆ ಎಂದೇ ಭಾವಿಸೋಣ’’ ಎಂದು. ಇದು ‘ಚಿತ್ರದೊಳಗಿನ ಸಿನೆಮಾದ ನಾಯಕನ’ ಬಗ್ಗೆ ಹೇಳುವ ಮಾತು. ಈ ಚಿತ್ರದ ಬಗ್ಗೆ ಕೂಡ ಅದನ್ನೇ ಹಾರೈಸಬಹುದು.

ನಿರ್ದೇಶನ: ಪಿ. ವಾಸು

ನಿರ್ಮಾಣ: ಮುಖೇಶ್ ಆರ್. ಮೆಹ್ತಾ

ತಾರಾಗಣ: ರವಿಚಂದ್ರ ವಿ., ನವ್ಯಾ ನಾಯರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News