ಪುತ್ತೂರು: ಮಹಿಳೆಯ ಅಪಹರಣ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2021-12-13 13:08 GMT
ಸಾಂದರ್ಭಿಕ ಚಿತ್ರ

ಪುತ್ತೂರು: ಮಹಿಳೆಯೊಬ್ಬರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ಇಬ್ಬರು ಆರೋಪಿಗಳನ್ನು ಸೋಮವಾರ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಕೊಡಂಗೋಣಿ ನಿವಾಸಿಗಳಾದ ಚಂದ್ರಶೇಖರ ಮತ್ತು ಜಗದೀಶ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳ ಪೈಕಿ ಓರ್ವ ಮಹಿಳೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈತನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಮಹಿಳೆ ಮತ್ತು ಆರೋಪಿಯ ನಡುವೆ ವಾಗ್ವಾದ ನಡೆದಿತ್ತು ಮತ್ತು ಮೊಬೈಲ್ ಮೂಲಕ ಚಕಮಕಿಯೂ ನಡೆದಿತ್ತು. ಆ ಬಳಿಕ ಮಾತುಕತೆಗೆ ತಿಂಗಳಾಡಿಗೆ ಮಹಿಳೆಯನ್ನು ಬರುವಂತೆ ತಿಳಿಸಿದ ಆರೋಪಿಯು ತನ್ನ ಸಹಚರನೊಂದಿಗೆ ಸೇರಿಕೊಂಡು ಅಪಹರಣ ನಡೆಸಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಮಾಹಿತಿ ಅರಿತ ಪೊಲೀಸರು ಕೂಡಿ ಹಾಕಲಾಗಿದ್ದ ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News