ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಯು.ಎಸ್.ಶೆಣೈ ಆಯ್ಕೆ
ಕೋಟ, ಡಿ.15: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ್ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತ, ಕುಂದಪ್ರಭ ವಾರಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಆಯ್ಕೆ ಯಾಗಿದ್ದಾರೆ.
ಡಿ.26ರಂದು ಅಪರಾಹ್ನ 3.30ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿರುವುರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ 40 ವರ್ಷ ಸೇವೆ ಸಲ್ಲಿಸಿರುವ ಶೆಣೈ 1991ರಲ್ಲಿ ಕುಂದಾಪುರ ತಾಲೂಕಿನ ಪ್ರಥಮ ಪತ್ರಿಕೆಯಾಗಿ ಕುಂದಪ್ರಭ ವಾರಪತ್ರಿಕೆಯನ್ನು ಆರಂಭಿಸಿದ್ದಾರೆ. ನಿರಂತರ ಮೂರು ದಶಕಗಳಿಂದ ಈ ಪತ್ರಿಕೆಯನ್ನು ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಶೆಣೈಯವರದ್ದು. ಸುಮಾರು 25ಕ್ಕೂ ಮಿಕ್ಕಿ ಯುವ ಪತ್ರಕರ್ತರಿಗೆ ತರಬೇತಿ ನೀಡಿ ಪತ್ರಕರ್ತರಾಗಿ ರೂಪು ಗೊಳಿಸಿರುವ ಇವರು, ಕುಂದಾಪುರದ 101 ಗ್ರಾಮಗಳು, ಪುಣ್ಯನದಿ ಪಂಚ ಗಂಗಾವಳಿ, ಕಂಪ್ಯೂಟರ್ ಕಲಿಯಿರಿ, ಏಡ್ಸ್ ಮಹಾಮಾರಿ, ಇನ್ನಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಂಗಳೂರಿನ ನವಭಾರತ, ಇಂಡಿಯನ್ ಎಕ್ಸ್ಪ್ರೆಸ್, ಮುಂಗಾರು, ಹೊಸದಿಗಂತ ಪತ್ರಿಕೆಗಳಲ್ಲೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಕೊಂಕಣಿ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಪತ್ರಿಕೆಯನ್ನು ನಡೆಸುತ್ತಿದ್ದಾರೆ.