×
Ad

ಡಿ. 31ರಂದು ಸೋಡಾ ಶರ್ಬತ್ ರಾಜ್ಯಾದ್ಯಂತ ಬಿಡುಗಡೆ

Update: 2021-12-16 15:53 IST

ಮಂಗಳೂರು, ಡಿ.16: ಪಿಬಿಪಿ ಫಿಲಂಸ್ ಬ್ಯಾನರ್‌ನಡಿ ಮೂಡಿಬಂದ ‘ಸೋಡಾ ಶರ್ಬತ್’ ತುಳು ಚಲನಚಿತ್ರ ಡಿ.31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಮೆಲ್ವಿನ್ ಎಲ್ಪೆಲ್ ಅವರು ಮಾಹಿತಿ ನೀಡಿ, ಬಹು ನಿರೀಕ್ಷಿತ ಸೋಡಾ ಶರ್ಬತ್ ಚಿತ್ರದಲ್ಲಿ ಹೊಸ ಪ್ರತಿಭೆ ಹರ್ಷಿತ್ ಬಂಗೇರ ಅವರು ನಾಯಕ ನಟನಾಗಿ ಅಭಿನಯಿಸಿದ್ದು, ರಂಜಿತಾ ಲೂವೀಸ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರ್, ದೀಪಕ್ ರೈ ಪಾಣಾಜೆ, ರಮೇಶ್ ರೈ ಕುಕ್ಕುವಳ್ಳಿ ಮೆಲ್ಲು ವೆಲೆನ್ಶಿಯಾ, ಲವೀನಾ ಫೆರ್ನಾಂಡಿಸ್, ಗೋಡ್ವಿನ್ ಬೆಳ್ಳೆ ಸೇರಿದಂತೆ ಪ್ರಮುಖರು ನಟಿಸಿದ್ದಾರೆ ಎಂದರು.

ಕೊಂಕಣಿಯ ಏಕ್ ಅಸ್ಲ್ಯಾರ್ ಏಕ್ ನಾ ಎಂಬ ಕೊಂಕಣಿ ಚಲನಚಿತ್ರ ನಿರ್ದೇಶಿಸಿದ ಪ್ರದೀಪ್ ಬಾರ್ಬೋಜಾ ಪಾಲಡ್ಕ ಅವರು ಸೋಡಾ ಶರ್ಬತ್ತ್ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕನಸು ಮಾರಾಟಕ್ಕಿದೆ, ಕಟಪಾಡಿ ಕಟ್ಟಪ್ಪ ಮುಂತಾದ ಚಿತ್ರಕ್ಕೆ ಸಂಕಲನ ನಿರ್ವಹಿಸಿದ ಗಣೇಶ್ ನೀರ್ಚಾಲ್ ಅವರು ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ಯಾಟ್ಸನ್ ಪಿರೇರಾ ಮಂಗಳೂರು ಅವರ ಸಂಗೀತ ನಿರ್ದೇಶನ, ತ್ಯಾಗರಾಜ್ ಮತ್ತು ನೀತು ನಿನದ್ ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ ಎಂದು ಹೇಳಿದರು.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ನಿಹಾಲ್ ತಾವ್ರೊ ಹಾಗೂ ದೇವದಾಸ್ ಕಾಪಿಕಾಡ್, ಭೋಜರಾಜ ಮಂಜೂರು ಜೊತೆಗೂಡಿ ಹಾಡಿದ್ದಾರೆ. ಉಮೇಶ್ ಮಿಜಾರು ಹಾಗೂ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನೆರವೇರಿಸಿದ್ದೇವೆ. ಸಾಲಗಾರನೊಬ್ಬ ಸಾಲದ ಸುಳಿಯಿಂದ ಯಾವ ರೀತಿ ಬಚಾವ್ ಆಗುತ್ತಾನೆ ಎಂಬ ಕಥೆಯ ಹಂದರವಿದ್ದು, ಪ್ರೀತಿ, ಪ್ರೇಮದ ಎಳೆಯೂ ಚಿತ್ರದಲ್ಲಿದೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಹರ್ಷಿತ್ ಬಂಗೇರ, ನಟರಾದ ಭೋಜರಾಜ ವಾಮಂಜೂರು, ಉಮೇಶ್ ಮಿಜಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News