ಮಣಿಪಾಲದಲ್ಲಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಉದ್ಘಾಟನೆ
ಉಡುಪಿ, ಡಿ.17: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ(ಕೆಎಂಸಿ) ಆಶ್ರಯದಲ್ಲಿ ಮಣಿಪಾಲದ ಎಂಡ್ ಪಾಯಿಂಟ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಮೂರು ದಿನಗಳ ಕಾರ್ಪೊರೇಟ್ ಕ್ರಿಕೆಟ್ ಲೀಗ್(ಸಿಸಿಎಲ್)-2021ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಟ್ರೋಫಿ ಅನಾವರಣ ಮಾಡಿ ಮೊದಲ ಟಾಸ್ ಮಾಡುವುದರ ಮೂಲಕ ಸಿಸಿಎಲ್ ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಿಂದ ಹೆಚ್ಚಿನವರಿಗೆ ಆಡಲು ಅವಕಾಶ ಸಿಗಲಿಲ್ಲ. ಈಗ ಇದಕ್ಕೆ ಒಂದು ಅವಕಾಶವನ್ನುಕಸ್ತೂರ್ಬಾ ಆಸ್ಪತ್ರೆ ಮಾಡಿಕೊಟ್ಟಿದೆ. ಮಾಹೆ ಮಣಿಪಾಲವು ಯಾವಾಗಲೂ ಕ್ರೀಡೆ ಮತ್ತು ಚಟುವಟಿಕೆಗಳಿಗೆ ತುಂಬಾ ಬೆಂಬಲ ನೀಡುತ್ತದೆ. ಕೆಲವೇ ಕೆಲವು ವಿಶ್ವವಿದ್ಯಾನಿಲಯ ಗಳು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಗಾಗಿ ಭಾರತ ಸರಕಾರದಿಂದ ಗುರುತಿಸಲ್ಪಟ್ಟಿವೆ, ಅವುಗಳಲ್ಲಿ ಮಾಹೆ ಮಣಿಪಾಲವು ಸಹ ಒಂದಾಗಿದೆ, ಎಂದರು.
ಈ ಸಂದರ್ಭದಲ್ಲಿ ಮಾಹೆ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್(ಡಾ) ಎಂ.ಡಿ.ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಪಿಎಲ್ಎನ್ಜಿ ರಾವ್, ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್, ಕೆಎಂಸಿಯ ಸಿಒಒ ಸಿ.ಜಿ.ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕ ಡಾ.ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
ಈ ಪಂದ್ಯಾಟದಲ್ಲಿ ಕಾರ್ಪೊರೇಟ್ ಕಂಪನಿ, ಸರಕಾರಿ ಅಧಿಕಾರಿಗಳ, ಬ್ಯಾಂಕ್, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಸೇರಿದಂತೆ ಒಟ್ಟು ಸುಮಾರು 21 ತಂಡಗಳು ಭಾಗವಹಿಸಿವೆ. ಡಿ.19ರಂದು ನಡೆಯುವ ಸಮಾ ರೋಪ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ಭಾಗವಹಿಸಲಿರುವರು.