ಮಂಗಳೂರು ಗೋಲಿಬಾರ್ ಗೆ ಎರಡು ವರ್ಷ: ನಾಗರಿಕರಿಂದ ಸ್ಮರಣೆ
ಮಂಗಳೂರು, ಡಿ.19: ಎರಡು ವರ್ಷದ ಹಿಂದೆ ಬಂದರ್ನ ಅಝೀಝುದ್ದೀನ್ ರಸ್ತೆಯಲ್ಲಿ ನಡೆದ ಗೋಲಿಬಾರ್ ಕೃತ್ಯ ಖಂಡಿಸಿ ರವಿವಾರ ಸಂಜೆಯ ಸುಮಾರಿಗೆ ಸಮಾನ ಮನಸ್ಕರು ಕ್ಯಾಂಡಲ್ ಲೈಟ್ ಹಿಡಿದು ಸ್ಮರಿಸಿದರು.
ಜಲೀಲ್ ಅವರು ಪೊಲೀಸ್ ಗುಂಡೇಟಿಗೆ ಬಲಿಯಾದ ಸ್ಥಳದಲ್ಲಿ ಸಮಾನ ಮನಸ್ಕರು ಕ್ಯಾಂಡಲ್ ಲೈಟ್ ಹಿಡಿದು ಸ್ಮರಿಸಿದರು.
ಡಿಸೆಂಬರ್ 19, 2019ರಂದು ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಡೇಟು ಮೂಲಕ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದರು. ಹುತಾತ್ಮರನ್ನು ನೆನಪಿಸುತ್ತಾ ಮತ್ತು ಅಸಾಂವಿಧಾನಿಕವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಬೇಕು. ಮಂಗಳೂರು ಗೋಲಿಬಾರ್ ಬಗ್ಗೆ ಆಗಿನ ಉಡುಪಿ ಜಿಲ್ಲಾಧಿಕಾರಿ ತಯಾರಿಸಿದ್ದ ಮ್ಯಾಜಿಸ್ಟೀರಿಯಲ್ ತನಿಖಾ ವರದಿಯನ್ನು ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು ಎಂದು ಸಮಾನ ಮನಸ್ಕರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಎಸ್ಐಒ ಜಿಲ್ಲಾಧ್ಯಕ್ಷ ನಿಹಾಲ್ ಕುದ್ರೋಳಿ ಡಿ.19, 2019 ಮಂಗಳೂರಿನ ಇತಿಹಾಸದಲ್ಲೇ ಕಪ್ಪು ಅಕ್ಷರಗಳಲ್ಲಿ ಬರೆಯಲ್ಪಟ್ಟಿರುವ ದಿನ. ಪೊಲೀಸರ ಕ್ರೌರ್ಯಕ್ಕೆ ಆ ದಿನ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಈವರೆಗೂ ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ದೊರಕಿಲ್ಲ ಮತ್ತು ತಪ್ಪಿತಸ್ತ ಅಧಿಕಾರಿಗಳಿಗೆ ಶಿಕ್ಷೆಯಾಗಿಲ್ಲ ಎಂದು ಹೇಳಿದರು.
ಮಂಗಳೂರು ಗೋಲಿಬಾರ್ ಬಗ್ಗೆ ನಡೆಸಲಾದ ಮ್ಯಾಜಿಸ್ಟೀರಿಯಲ್ ತನಿಖಾ ವರದಿಯು ಪೊಲೀಸರಿಗೆ ಕ್ಲೀನ್ ಚಿಟ್ ನೀಡಿರುವುದು ಆಶ್ಚರ್ಯಕರ ಎಂದು ನಿಹಾಲ್ ಕುದ್ರೋಳಿ ಅಭಿಪ್ರಾಯಪಟ್ಟರು. ಕೃಷಿ ಕಾನೂನುಗಳನ್ನು ಹಿಂಪಡೆದ ರೀತಿಯಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಶಬೀರ್ ಅಹ್ಮದ್, ಸಿಎಎ ಕಾಯ್ದೆಯನ್ನು ವಾಪಸ್ ಪಡೆಯದಿದ್ದಲ್ಲಿ ಮತ್ತೊಮ್ಮೆ ಹೋರಾಟ ಪ್ರಾರಂಭಿಸಲಿದ್ದೇವೆ ಎಂದು ಹೇಳಿದರು. ಇದೇ ದಿನದಂದು ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಾದ ಅಶ್ಫಾಕುಲ್ಲಾಹ್ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು ನೆನಪಿಸಿಕೊಂಡರು.
ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಬಂದರ್ ಪ್ರದೇಶದ ನಾಗರಿಕರು, ಜಿಐಒ ಮಾಜಿ ರಾಜ್ಯಾಧ್ಯಕ್ಷೆ ಉಮೈರಾ ಬಾನು, ಎಸ್ಐಒ ಮಂಗಳೂರು ನಗರಾಧ್ಯಕ್ಷ ಸಲ್ಮಾನ್ ಕುದ್ರೋಳಿ, ಮುಹ್ಸಿನ್ ಕಂದಕ್, ಮೆಹರ್ ಮತ್ತಿತರರು ಉಪಸ್ಥಿತರಿದ್ದರು.