ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅಮಾನತಿಗೆ ಆಗ್ರಹಿಸಿ ಪ್ರತಿಪಕ್ಷದಿಂದ ರ್ಯಾಲಿ
ಜಮ್ಮು , ಡಿ. 21: ರಾಜ್ಯಸಭೆಯ 12 ಮಂದಿ ಸಂಸದರ ಅಮಾನತನ್ನು ರದ್ದುಗೊಳಿಸುವಂತೆ ಹಾಗೂ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದಿಲ್ಲಿಯಲ್ಲಿ ಮಂಗಳವಾರ ಪ್ರತಿಪಕ್ಷ ಪ್ರತಿಭಟನಾ ರ್ಯಾಲಿ ನಡೆಸಿತು. ಸಂಸತ್ ಭವನದ ಗಾಂಧಿ ಪ್ರತಿಮೆಯಿದ ವಿಜಯ ಚೌಕದ ವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು.
ವಿಜಯ ಚೌಕದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ನಾವೆಲ್ಲ ಸಂಘಟಿತರಾಗಿದ್ದೇವೆ ಎಂದು ಹೇಳಲು ಬಯಸುತ್ತೇವೆ. ರೈತರ ವಿರುದ್ಧದ ಹಿಂಸಾಚಾರಕ್ಕೆ ಕಾರಣರಾಗಿರುವವರನ್ನು ಕಾನೂನಿನ ಅಡಿಗೆ ತರಬೇಕು’’ ಎಂದರು. ‘‘ಆತ ಯಾರ ಪುತ್ರ ಎಂಬ ಬಗ್ಗೆ ಹಾಗೂ ಆತನ ರಕ್ಷಣೆ ಮಾಡುತ್ತಿರುವ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ’’ ಎಂದು ಅವರು ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರನ್ನು ಉಲ್ಲೇಖಿಸಿ ಹೇಳಿದರು. ರೈತರ ಹತ್ಯೆ ಯೋಜಿತ ಪಿತೂರಿಯಾಗಿತ್ತು ಹಾಗೂ ಇದು ಹತ್ಯೆ ಪ್ರಕರಣ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಹೇಳಿದ ಬಳಿಕ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎಂಬ ಆಗ್ರಹ ತೀವ್ರವಾಗಿ ಕೇಳಿ ಬಂದಿದೆ.