ತಂಡದಿಂದ ರಿಕ್ಷಾ ಚಾಲಕನ ಸುಲಿಗೆ : ದೂರು

Update: 2021-12-26 16:47 GMT

ಗಂಗೊಳ್ಳಿ, ಡಿ.26: ತಂಡವೊಂದು ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ ಚಿನ್ನದ ಸರ ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ಡಿ.20ರಂದು ರಾತ್ರಿ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿ ನಡೆದಿದೆ.

ಹಕ್ಲಾಡಿಗುಡ್ಡೆಯ ಶಿವ ಪೂಜಾರಿ(61) ಎಂಬವರು ಆಲೂರು-ಮುಳ್ಳಿಕಟ್ಟೆ ರಸ್ತೆಯಲ್ಲಿ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಬರುವಾಗ ಎರಡು ಬೈಕ್‌ಗಳನ್ನು ನಾಲ್ಕು ಮಂದಿ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ರಿಕ್ಷಾವನ್ನು ನಿಲ್ಲಿಸಿದರು. ಅವರಲ್ಲಿ ಒಬ್ಬ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಮುಳ್ಳಿಕಟ್ಟೆಗೆ ಹೋಗಿ ಪೆಟ್ರೋಲ್ ತರುವ ಎಂದು ಹೇಳಿ ರಿಕ್ಷಾದಲ್ಲಿ ಕುಳಿತುಕೊಂಡನು.

ರಿಕ್ಷಾವನ್ನು ಚಲಾಯಿಸಿಕೊಂಡು ಸ್ವಲ್ಪಮುಂದೆ ಹೋದಾಗ ರಿಕ್ಷಾದಲ್ಲಿ ಕುಳಿತಿದ್ದ ವ್ಯಕ್ತಿಯು ರಿಕ್ಷಾ ಚಲಾಯಿಸುತ್ತಿದ್ದ ಶಿವ ಪೂಜಾರಿಯ ಎರಡೂ ಕೈಗಳನ್ನು ಹಿಂದಕ್ಕೆ ಎಳೆದು ಗಟ್ಟಿಯಾಗಿ ಹಿಡಿದುಕೊಂಡು ರಿಕ್ಷಾವನ್ನು ನಿಲ್ಲಿಸಿದನು. ಆಗ ಬೈಕ್‌ನಲ್ಲಿದ್ದ ಮೂವರು ರಿಕ್ಷಾದ ಬಳಿಗೆ ಬಂದು ಚಾಲಕನಿಗೆ ಕೈಯಿಂದ ಗುದ್ದಿ ಅವರ ಕುತ್ತಿಗೆಯಲ್ಲಿದ್ದ 52,000ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News