×
Ad

ಕೋಟ ಮೆಹಂದಿ ಮನೆಯಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ವರ ರಾಜೇಶ್ ಸೇರಿ 7 ಮಂದಿಯ ವಿರುದ್ಧ ಕೇಸ್

Update: 2021-12-30 16:52 IST

ಉಡುಪಿ, ಡಿ.30: ಕಳೆದ ಸೋಮವಾರ ರಾತ್ರಿ ಕೋಟತಟ್ಟು ಗ್ರಾಪಂನ ಬಾರಿಕೆರೆ ಕೊರಗರ ಕಾಲನಿಯಲ್ಲಿ ಮದುವೆಯ ಮೆಹಂದಿ ಕಾರ್ಯಕ್ರಮ ನಡೆಯುತಿದ್ದ ಮನೆಗೆ ಕೋಟ ಪೊಲೀಸರು ನುಗ್ಗಿ ಲಾಠಿ ಪ್ರಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ ರಾಜೇಶ್, ಕೊರಗ ಮುಖಂಡ ಗಣೇಶ್ ಬಾರ್ಕೂರು ಸೇರಿದಂತೆ ಒಟ್ಟು ಏಳು ಮಂದಿ ಕೊರಗ ಯುವಕರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಕಾನ್‌ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಯರಾಮ ನಾಯ್ಕ್ ಎಂಬವರು, ಸಾರ್ವಜನಿಕರಿಂದ ಬಂದ ದೂರಿನಂತೆ ಪಿಎಸ್‌ಐ ಸಂತೋಷ್ ಅವರೊಂದಿಗೆ ರಾತ್ರಿ 11:10ಕ್ಕೆ ಸ್ಥಳಕ್ಕೆ ತೆರಳಿದಾಗ ಮೆಹಂದಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ರಾಜೇಶ್, ಸುದರ್ಶನ್, ಗಣೇಶ ಬಾರಕೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಸೇರಿದಂತೆ 30ರಿಂದ 50 ಮಂದಿ ಮದ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ ನೃತ್ಯ ಮಾಡುತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಎಂಬವರು ಪಿಎಸ್‌ಐ ಬಳಿ, ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸೌಂಡ್ ಕಡಿಮೆ ಇಡುವಂತೆ 112 ಸಿಬ್ಬಂದಿಗಳ ಮೂಲಕ ಹೇಳಿಸಿದರೂ ಆರೋಪಿಗಳು ಉಡಾಫೆಯಾಗಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಆಗ ಎಸ್ಸೈ ಅವರು ಡಿಜೆ ಸೌಂಡ್ ಕಡಿಮೆ ಮಾಡುವಂತೆ ತಿಳಿಸಿದಾಗ, ಆರೋಪಿತರು ಗುಂಪು ಕಟ್ಟಿಕೊಂಡು ಅವರಿಗೂ ಉಡಾಫೆಯ ಉತ್ತರ ನೀಡಿ ಸಮವಸ್ತ್ರದಲ್ಲಿದ್ದ ಅವರನ್ನು ಕೈಯಿಂದ ದೂಡಿದ್ದಾರೆ. ತಾನು ಡಿಜೆ ಬಂದ್ ಮಾಡಲು ಹೋದಾಗ ದೊಣ್ಣೆಯಿಂದ ತನಗೆ ಹೊಡೆದು ಗಾಯಗೊಳಿಸಿದ್ದಾಗಿ ದೂರಿನಲ್ಲಿ ವಿವರಿಸಿದ್ದಾರೆ.

ಆರೋಪಿಗಳು ಮಾಡಿದ ಹಲ್ಲೆಯಿಂದ ಕೈನೋವು ಜಾಸ್ತಿಯಾಗಿದ್ದು, ಕೋಟಿ ಸಮುದಾಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಕಡಿಮೆಯಾಗದ ಕಾರಣ ಕುಂದಾಪುರ ತಾಲೂಕು ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿದ್ದಾಗಿ ಕೋಟ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಏಳು ಮಂದಿ ಆರೋಪಿಗಳ ವಿರುದ್ಧ ಕಲಂ 143,147,148,323, 324, 353, 504, 506 ಜೊತೆಗೆ 149 ಐಪಿಸಿ ಮತ್ತು 3(1)(r), 3(1)(s), 3(2)(va), ಎಸ್‌ಸಿ ಎಸ್‌ಟಿ ಆ್ಯಕ್ಟ್1989ರಂತೆ ಪ್ರಕರಣ ದಾಖಲಾಗಿದೆ.

ರಾಜೇಶ್‌ ರಿಂದಲೂ ದೂರು ದಾಖಲು

ಈ ನಡುವೆ ರಾಜೇಶ್ ಅವರು ಕೋಟ ಠಾಣೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ನೆರೆದ ಜನರ ಮೇಲೆ ಕೋಟ ಪೊಲೀಸರು ವಿನಾಕಾರಣ ಲಾಠಿಪ್ರಹಾರ ನಡೆಸಿದ್ದಾಗಿ ಠಾಣೆಯ ಪಿಎಸ್‌ಐ ಸಂತೋಷ್ ಸೇರಿದಂತೆ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜೇಶ್ ದೂರಿನ ಸಾರಾಂಶ: ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ಗಣಪ ಎಂಬವರ ಮನೆಯಲ್ಲಿ ಡಿ.27ರ ರಾತ್ರಿ ಮೆಹಂದಿ ಶಾಸ್ತ್ರವಿದ್ದು, ಡಿಜೆಯನ್ನು ವ್ಯವಸ್ಥೆ ಮಾಡಲಾಗಿತ್ತು. ನೆಂಟರಿಸ್ಟರೆಲ್ಲ ಸೇರಿ 8:00ಕ್ಕೆ ಪ್ರಾರಂಭಿಸಿ 10 ಗಂಟೆಗೆ ಮುಗಿಸಲು ಅಣಿಯಾಗುತಿದ್ದಾಗ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿ ಪಿ, ಹೆಡ್ ಕಾನ್‌ಸ್ಟೇಬಲ್ ರಾಮಣ್ಣ, ಅಶೋಕ್ ಶೆಟ್ಟಿ, ಮಂಜುನಾಥ ಮತ್ತು ಇತರ ಸಿಬ್ಬಂದಿಗಳು ಮೆಹೆಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿ, ಬೈದು, ಲಾಠಿಯಿಂದ ತನ್ನ ಚಿಕ್ಕಪ್ಪ ಗಣೇಶ ಬಾರ್ಕೂರು ಎಂಬವರಿಗೆ ಹೊಡೆದು, ಹಲ್ಲೆ ನಡೆಸಿ ಜೀಪಿಗೆ ತುಂಬುತ್ತಿದ್ದಂತೆ ತಾನು, ತಾಯಿ ಗಿರಿಜ ಹಾಗೂ ಇತರೆ ಹಿರಿಯ ಮಹಿಳೆಯರು ಮನವಿ ಮಾಡಿಕೊಂಡರೂ ಸ್ಪಂದಿಸದೇ, ಲಕ್ಷ್ಮೀ ಎಂಬವರಿಗೆ ಲಾಠಿಯಿಂದ ತಲೆಗೆ ಹೊಡೆದು ಬೂಟು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಸುದರ್ಶನ, ಗಿರೀಶ ಮತ್ತು ಸಚಿನ್ ಎಂಬುವರನ್ನು ಜೀಪಿಗೆ ತುಂಬಿ ಠಾಣೆಗೆ ಕರೆದುಕೊಂಡು ಹೋಗಿದ್ದಲ್ಲದೇ, ಠಾಣೆಯಲ್ಲಿ ಎಲ್ಲರನ್ನೂ ವಿವಸ್ತ್ರಗೊಳಿಸಿ ಸೆಲ್ ಒಳಗೆ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಮದುಮಗ ರಾಜೇಶ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎರಡೂ ದೂರುಗಳ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ತಾಳೆಯಾಗದ ಘಟನಾ ಸಮಯ

ಮೆಹಂದಿ ಮನೆಯಲ್ಲಿ ಕೋಟ ಪೊಲೀಸರು ನಡೆಸಿದ ಲಾಠಿ ಪ್ರಹಾರ, ಹಲ್ಲೆಗೆ ಸಂಬಂಧಿಸಿದಂತೆ ಇದೀಗ ಸಂತ್ರಸ್ಥ ಕೊರಗ ಕುಟುಂಬ ಹಾಗೂ ಕೋಟ ಪೊಲೀಸರಿಂದ ಪ್ರತ್ಯೇಕ ದೂರು ದಾಖಲಾಗಿದೆ. ಆದರೆ ಈ ದೂರಿನಲ್ಲಿ ಘಟನೆ ನಡೆದ ಸಮಯ ಮಾತ್ರ ತಾಳೆಯಾಗುತ್ತಿಲ್ಲ.

ಮದುಮಗ ರಾಜೇಶ್ ನೀಡಿದ ದೂರಿನಲ್ಲಿ ಡಿಜೆ ಅಳವಡಿಸಿದ ಮೆಹಂದಿ ರಾತ್ರಿ 8ಕ್ಕೆ ಪ್ರಾರಂಭಗೊಂಡು 10ಗಂಟೆಗೆ ಮುಗಿಸುವಾಗ ಪೊಲೀಸರು ಹಠಾತ್ತನೆ ನುಗ್ಗಿ, ನೆರೆದವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾಗಿ ಹೇಳಿದರೆ, ಠಾಣೆಯ ಕಾನ್‌ಸ್ಟೇಬಲ್ ಜಯರಾಮ ನಾಯ್ಕಾ ನೀಡಿದ ದೂರಿನಲ್ಲಿ ಪಿಎಸ್‌ಐ ಅವರೊಂದಿಗೆ ತಾವು 11:10ಕ್ಕೆ ಮೆಹಂದಿ ನಡೆಯುವ ಸ್ಥಳಕ್ಕೆ ತೆರಳಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಅಲ್ಲಿ ದೂರು ನೀಡಿದ ಸ್ಥಳೀಯರಾದ ಸುಬ್ರಹ್ಮಣ್ಯ ಉರಾಳ ಇದ್ದಿದ್ದಾಗಿ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News