ಉಡುಪಿ ಜಿಲ್ಲೆಯ ಜವುಳಿ ಪಾರ್ಕ್ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ: ಸಚಿವ ಶಂಕರ ಬಿ.ಪಾಟೀಲ
ಉಡುಪಿ, ಡಿ.31: ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪಿಸಲುದ್ದೇಶಿಸಿರುವ ಜವುಳಿ ಪಾರ್ಕ್ನಲ್ಲಿ ಜಿಲ್ಲೆಯ ನೇಕಾರರಿಗೆ ಅದರಲ್ಲೂ ವಿಶೇಷವಾಗಿ ಯುವ ನೇಕಾರರಿಗೆ ಸೂಕ್ತ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವೊಂದನ್ನು ಸ್ಥಾಪಿಸಲು ನಿರ್ಧರಿಸಿರು ವುದಾಗಿ ರಾಜ್ಯ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಜಿಲ್ಲೆಯ ಕೈಮಗ್ಗ ನೇಕಾರಿಕೆ ಕುರಿತಂತೆ ಖುದ್ದಾಗಿ ತಿಳಿದುಕೊಳ್ಳಲು ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಸಚಿವರು ಉಡುಪಿ ನೇಕಾರರ ಪ್ರಾಥಮಿಕ ಸೇವಾ ಸಹಕಾರ ಸಂಘದಲ್ಲಿ ನಡೆದ, ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದುಕೊರತೆಗಳನ್ನು ಆಲಿಸುವ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು.
ಜಿಲ್ಲೆಗೆ ಈಗಾಗಲೇ ಜವುಳಿ ಪಾರ್ಕ್ ಮಂಜೂರಾಗಿದ್ದು, ಕಾರ್ಕಳದ 20 ಎಕರೆ ಜಾಗದಲ್ಲಿ ಅದು ತಲೆ ಎತ್ತಲಿದೆ. ಇಲ್ಲಿ ಕೈಮಗ್ಗ ನೇಕಾರರಿಗೆ ಬೇಕಾದ ತರಬೇತಿಯನ್ನು ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ತೆರೆಯಲಾಗುವುದು ಎಂದರು.
ಅಲ್ಲದೇ ಉಡುಪಿ ಜಿಲ್ಲೆಯ ಕೈಮಗ್ಗಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಜವಳಿ ಇಂಜಿನಿಯರ್ಗಳು ಮತ್ತು ಜವಳಿ ಪರಿಣಿತ ರನ್ನು ಒಳಗೊಂಡ ಇಲಾಖಾ ತಂಡವೊಂದನ್ನು ಜಿಲ್ಲೆಗೆ ಕಳುಹಿಸಿ, ಅವರಿಂದ ಪರಿಶೀಲನಾ ವರದಿ ಪಡೆದು, ಕೈಮಗ್ಗಗಳನ್ನು ತಾಂತ್ರಿಕವಾಗಿ ಸುಧಾರಿಸಿ, ನೇಕಾರರಿಗೆ ಆರ್ಥಿಕ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ನೇಕಾರಿಕೆ ಎಂಬುದು ಪರಿಶ್ರಮ ಬೇಡುವ, ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣದಿಂದ ಯುವಜನತೆ ಈ ಉದ್ಯೋಗ ದಿಂದ ದೂರ ಉಳಿದಿದ್ದಾರೆ. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಅದನ್ನು ಲಾಭದಾಯಕವನ್ನಾಗಿ ಮಾಡಲು ತಜ್ಞರ ತಂಡ ಬೇಕಾದ ಸಲಹೆಗಳನ್ನು ನೀಡುವಂತೆ ಸೂಚಿಸಲಾಗುವುದು ಎಂದರು.
ತಂಡ ಜಿಲ್ಲೆಯಲ್ಲಿ ಹಿರಿಯ, ಅನುಭವಿ ನೇಕಾರರನ್ನು ಭೇಟಿಯಾಗಿ, ವಿವಿಧ ನೇಕಾರರ ಸಹಕಾರಿ ಸಂಘಗಳೊಂದಿಗೆ ಸಮಾ ಲೋಚಿಸಿ, ಜಿಲ್ಲೆಯ ಕೈಮಗ್ಗದ ಉದ್ಯಮ ಆರ್ಥಿಕವಾಗಿ ಲಾಭದಾಯಕವಾಗುವ ಕುರಿತಂತೆ ವರದಿ ಸಲ್ಲಿಸಲಿದೆ. ಅದನ್ನು ಪರಿಶೀಲಿಸಿ ಕರಾವಳಿಯ ಕೈಮಗ್ಗ ನೇಕಾರಿಕೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು ಎಂದರು.
ಜವಳಿ ಪಾರ್ಕ್ನ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ವೃತ್ತಿಪರ ನೇಕಾರರೊಂದಿಗೆ, ಆಸಕ್ತ ವಿದ್ಯಾರ್ಥಿಗಳಿಗೂ ಸಹ ತರಬೇತಿ ನೀಡಲಾ ಗುವುದು. ಈ ಮೂಲಕ ಈಗ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತುಂಬಾ ಬೇಡಿಕೆಯನ್ನು ಹೊಂದಿರುವ ಕೈಮಗ್ಗದ ಉಡುಪಿ ಸೀರೆಗಳಿಗೆ ಹಾಗೂ ಇತರ ಉತ್ಪನ್ನಗಳ ಪುನರುಜ್ಜೀವನಕ್ಕೆ ಪ್ರಯತ್ನಿಸಲಾಗುವುದು ಎಂದು ಸಚಿವ ಶಂಕರ ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ರೈತರಿಗೆ ನೀಡುವಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು, ನೇಕಾರ ಸಮ್ಮಾನ ಯೋಜನೆಯಡಿ ನೇಕಾರರ ಬ್ಯಾಂಕ್ ಖಾತೆಗೆ ನೇರವಾಗಿ 2000ರೂ. ಜಮಾ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ರೈತರಿಗೆ ನೀಡುವಂತೆ ವಿವಿಸೌಲ್ಯಗಳನ್ನು ಒದಗಿಸಲಾಗು ವುದು ಎಂದ ಅವರು, ನೇಕಾರ ಸಮ್ಮಾನ ಯೋಜನೆಯಡಿ ನೇಕಾರರ ಬ್ಯಾಂಕ್ ಖಾತೆಗೆ ನೇರವಾಗಿ 2000ರೂ. ಜಮಾ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 12 ಲಕ್ಷ ನೇಕಾರರಿಗೆ ಈಗಾಗಲೇ 122 ಕೋಟಿ ರೂ. ಗಳ ಸಬ್ಸಿಡಿ ನೀಡಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಬಡ್ಡಿ ಸಹಾಯಧನ ಯೋಜನೆಯ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಕೈಮಗ್ಗಗಳನ್ನು ಪುನಃಶ್ಚೇತನ ಗೊಳಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸುವುದರ ಮೂಲಕ ಯುವಜನತೆ ಇದರತ್ತ ಆರ್ಕಷಿತರಾಗುವಂತೆ ಹಾಗೂ ಈ ನೇಕಾರಿಕೆಯನ್ನು ಲಾಭದಾಯಕ ವಾಗುವಂತೆ ಮಾಡಬೇಕು. ಕೈಮಗ್ಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಕೈಮಗ್ಗ ಉತ್ಪನ್ನಗಳಿಗೆ ಮೊದಲು ಜಿಎಸ್ಟಿ ಇದ್ದಿರಲಿಲ್ಲ. ಬಳಿಕ ಅದನ್ನು ಶೇ.5ಕ್ಕೆ ನಿಗದಿಗೊಳಿಸಿ ಈಗ ಜಿಎಸ್ಟಿ ದರವನ್ನು ಶೇ.12ಕ್ಕೆ ನಿಗದಿಗೊಳಿಸಲಾಗಿದೆ. ಇದನ್ನು ಮತ್ತೆ ಶೇ.5ಕ್ಕೆ ಇಳಿಸಬೇಕು. ಅಲ್ಲದೇ ನೇಕಾರರಿಗೆ ನೀಡುವ ಮಜೂರಿ ಮೇಲೆ ಶೇ.10 ಇನ್ಸೆಂಟಿವ್ ಹಾಗೂ ಪ್ರೊತ್ಸಾಹಧನ ನೀಡಬೇಕು ಎಂದು ಜಿಲ್ಲೆಯ ನೇಕಾರು ಸಚಿವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಅಶೋಕ್, ದ.ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಶಿವಶಂಕರ್, ಉಡುಪಿ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಎಬ್ನೆಸರ್ ಸತ್ಯಾರ್ಥಿ, ಶಿವಳ್ಳಿ ನೇಕಾರರ ಸಂಘದ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ಸ್ವಾಗತಿಸಿ, ವಂದಿಸಿದರು.