ದಕ: ದಲಿತರ ಅಹವಾಲು ಸ್ವೀಕಾರ ಸಭೆಯಲ್ಲಿ ಪ್ರತಿಧ್ವನಿಸಿದ ಕೊರಗರ ಮನೆ ಮೆಹೆಂದಿ ಕಾರ್ಯಕ್ರಮ ಪ್ರಕರಣ
ಮಂಗಳೂರು : ಕಳೆದ ಸೋಮವಾರ ರಾತ್ರಿ ಕೋಟತಟ್ಟು ಗ್ರಾ.ಪಂ.ನ ಬಾರಿಕೆರೆ ಕೊರಗರ ಕಾಲನಿಯಲ್ಲಿ ಮದುವೆ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ಲಾಠಿ ಪ್ರಹಾರ ಅಮಾನವೀಯ ಹಾಗೂ ಖಂಡನೀಯ. ಶೋಷಿತ ಸಮುದಾಯ ತಮ್ಮ ಮನೆಯ ಕಾರ್ಯಕ್ರಮದಲ್ಲಿ ಡಿಜೆ ಬಳಸುವುದು ತಪ್ಪೇ ಎಂದು ದ.ಕ. ಜಿಲ್ಲಾ ದಲಿತ ನಾಯಕರು ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ದಲಿತರ ಅಹವಾಲು ಸ್ವೀಕಾರ ಸಭೆಯಲ್ಲಿ ದಲಿತ ನಾಯಕ ಶೇಖರ್ ಅವರು ಈ ಪ್ರಶ್ನೆ ಮಾಡಿದ್ದಾರೆ.
ಸಮಾಜ ಕಲ್ಯಾಣ ಸಚಿವರು ಕೊರಗ ಕುಟುಂಬದ ಸಂತ್ರಸ್ತರ ಮನೆಗೆ ತೆರಳಿ ನಿಮ್ಮ ಜತೆ ನಾವಿದ್ದೇವೆ ಎನ್ನುತ್ತಾರೆ. ಮತ್ತೊಂದೆಡೆ ಅದೇ ಮದುಮಗ ಸೇರಿ ಏಳು ಜನರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಇದೆಂತಹ ವಿಪರ್ಯಾಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕರಣದ ಬಗ್ಗೆ ತಪ್ಪಿತಸ್ಥ ಪೊಲೀಸರನ್ನು ಕೇವಲ ಸಸ್ಪೆಂಡ್ ಮಾಡುವುದು ಮಾತ್ರವಲ್ಲ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಅವರು ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದರು.
ಡಿಸಿ ಮನ್ನಾ ಜಾಗದ ಸಮಸ್ಯೆ ಬಗೆಹರಿಸಿಡಿಸಿ ಮನ್ನಾ ಜಾಗ ಕುರಿತಂತೆ ಸಾಕಷ್ಟು ಹೋರಾಟ ನಡೆಸಿದರೂ ಇನ್ನೂ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. 1980 ಬಳಿಕ ಜಿಲ್ಲೆಯಲ್ಲಿ ದಲಿತರಿಗೆ ಡಿಸಿ ಮನ್ನಾ ಭೂಮಿ ಮಂಜೂರಾಗಿಲ್ಲ. ಹೊರ ರಾಜ್ಯ ಜಿಲ್ಲೆಗಳಿಂದ ಬಂದವರು ಅಕ್ರಮವಾಗಿ ಇಲ್ಲಿನ ಭೂಮಿಯಲ್ಲಿ ನೆಲೆಸಿರುವಾಗ ಇಲ್ಲಿನ ದಲಿತರಿಗೆ ಅವರಿಗಾಗಿ ಮೀಸಲಿಟ್ಟ ಜಾಗವನ್ನು ಹಂಚಿಕೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ದಲಿತ ನಾಯಕ ಎಸ್.ಪಿ. ಆನಂದ ಪ್ರಶ್ನಿಸಿದರು.
ಅಂಬೇಡ್ಕರ್ ನಿಗಮದಡಿ ದಲಿತರಿಗೆ ಸ್ವ ಉದ್ಯೋಗಕ್ಕಾಗಿ ನೀಡಲಾಗುವ ಸಾಲ ಯೋಜನೆ ಪ್ರಸಕ್ತ ಆಯಾ ಕ್ಷೇತ್ರದ ಶಾಸಕರ ಮೂಲಕ ಮಂಜೂರಾಗುತ್ತಿರುವುದರಿಂದ ಯಾವುದೋ ನಿರ್ದಿಷ್ಟ ಪಕ್ಷಗಳ ಕಾರ್ಯಕರ್ತರಿಗೆ ಮಾತ್ರ ದೊರೆಯುತ್ತಿದೆ. ಹಿಂದೆ ಜಿಲ್ಲಾಧಿಕಾರಿ ಮೂಲಕ ಹಂಚಿಕೆಯಾಗುತ್ತಿದ್ದು, ಅದೇ ರೀತಿ ಮುಂದುವರಿಸಬೇಕು. ಜಿಲ್ಲೆಯ ಮೂಲಗಳಿಂದ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ದಲಿತ ಸಮುದಾಯದ ಮಕ್ಕಳಿಗಾಗಿರುವ ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
ನಾಯಕರಾದ ವಿಶ್ವನಾಥ್, ಡಿ.ಎಸ್. ಪ್ರಸನ್ನ ಹಾಗೂ ಇತರರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಮಂಡಿಸಿದರು. ಎಎಸ್ಪಿ ಶಿವಕುಮಾರ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸಮಗ್ರ ಪರಿಶೀಲನೆಯ ಬಳಿಕವೇ ಪ್ರಕರಣಗಳ ಬಿ ರಿಪೋರ್ಟ್
ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕೆಲವೊಂದು ಪ್ರಕರಣಗಳು ಮೇಲ್ವರ್ಗದವರ ಒತ್ತಡ ಹಾಗೂ ಹಣದ ಆಮಿಷದಿಂದ ಪೊಲೀಸರಿಂದ ‘ಬಿ’ ರಿಪೋರ್ಟ್ ಆಗಿ ಪರಿವರ್ತಿಸಲಾಗುತ್ತಿದೆ ಎಂದು ದಲಿತ ನಾಯಕರನೇಕರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಪ್ರಕರಣವು ಸಮಗ್ರ ಪರಿಶೀಲನೆಯ ಬಳಿಕವೇ ಸಾಕ್ಷಾಧಾರಗಳು ಇಲ್ಲವೆಂದಾಗ ಮಾತ್ರವೇ ಬಿ ರಿಪೋರ್ಟ್ ಮಾಡಲಾಗುತ್ತದೆ. ಠಾಣಾ ಮಟ್ಟದಿಂದ ವರಿಷ್ಠಾಧಿಕಾರಿ ಮಟ್ಟದಲ್ಲಿಯೂ ಪರಿಶೀಲನೆ ನಡೆಸಿ ಬಳಿಕ ಐಜಿಗೆ ವರದಿ ಸಲ್ಲಿಕೆಯಾದ ಬಳಿಕವೇ ಬಿ ರಿಪೋರ್ಟ್ ಮಾಡಲಾಗುತ್ತದೆ. ಹಾಗಾಗಿ ಅಂತಹ ಯಾವುದೇ ರೀತಿಯ ಒತ್ತಡ, ಆಮಿಷಕ್ಕೆ ಬಲಿಯಾಗುವ ಪ್ರಶ್ನೆಯೇ ಬರುವುದಿಲ್ಲ. ಅಂತಹ ಅನುಮಾನವಿದ್ದಾಗಲೂ ಸಂತ್ರಸ್ತರಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವಿರುತ್ತದೆ. ನ್ಯಾಯಾಲಯ ತನಿಖೆಗೆ ಆದೇಶ ನೀಡುವ ಅವಕಾಶವೂ ಇರುವುದರಿಂದ ಅಂತಹ ಅನುಮಾನ ಬೇಡ ಎಂದು ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ತಿಳಿಸಿದರು.
ರಾತ್ರಿ ಕರ್ಫ್ಯೂ ಹಿನ್ನೆಲೆ ಡ್ರಿಂಕ್ ಆ್ಯಂಡ್ ಡ್ರೈವ್ ಬಗ್ಗೆ ವಿಶೇಷ ತಪಾಸಣೆ: ಋಷಿಕೇಶ್ ಸೊನಾವಣೆ
ಕೊರೋನ ಹಾಗೂ ಒಮೈಕ್ರಾನ್ ಹಿನ್ನೆಲೆಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಇದೇ ವೇಳೆ ದ.ಕ. ಜಿಲ್ಲೆಯಾದ್ಯಂತ ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ವಿಶೇಷ ತಪಾಸಣೆಗೆ ನಡೆಸಲಾಗುವುದು. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿನ ಚೆಕ್ಪೋಸ್ಟ್ಗಳಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ತಿಳಿಸಿದ್ದಾರೆ.