ಅಕ್ಷಯ ಶೆಟ್ಟಿ ಅವರ ‘ದೆಂಗ’ ತುಳು ಕಾದಂಬರಿಗೆ ‘ಪಣಿಯಾಡಿ ಪ್ರಶಸ್ತಿ’
ಉಡುಪಿ, ಜ.4: ಉಡುಪಿ ತುಳುಕೂಟ ವತಿಯಿಂದ ನೀಡಲಾಗುವ 2020- 2021ನೇ ಸಾಲಿನ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಪೆರಾರ ಮುಂಡ ಬೆಟ್ಟುಗುತ್ತು ಅಕ್ಷಯ ಆರ್.ಶೆಟ್ಟಿ ಅವರ ‘ದೆಂಗ’ ಕಾದಂಬರಿ ಆಯ್ಕೆಯಾಗಿದೆ.
ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ.ಎಸ್.ಯು.ಪಣಿಯಾಡಿ, ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳುಕೂಟವು ಕಳೆದ 27 ವರ್ಷಗಳಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಕೃತಿ ಬಿಡುಗಡೆ ಸಮಾಂಭವನ್ನು ನಡೆಸಿಕೊಂಡು ಬಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೂತನ ‘ದೆಂಗ’ ತುಳು ಕಾದಂಬರಿ ಕೃತಿ ಬಿಡುಗಡೆಗೊಳ್ಳಲಿದೆ. ಈ ಬಾರಿ ಕಾದಂಬರಿ ಸ್ಪರ್ಧೆಗೆ ವಿವಿದೆಢೆಗಳಿಂದ ಒಟ್ಟು ಏಳು ಹಸ್ತಪ್ರತಿಗಳು ಬಂದಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಜಾನಕಿ ಬ್ರಹ್ಮಾವರ, ಸಕು ಪಾಂಗಾಳ, ಉಪನ್ಯಾಸಕಿ ಡಾ.ನಿಕೇತನ ಸಹಕರಿಸಿದ್ದರು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.