ಜ.10ರಂದು ಕೃಷ್ಣಾಪುರ ಸ್ವಾಮೀಜಿ ಪುರಪ್ರವೇಶ, ಪೌರ ಸನ್ಮಾನ
ಉಡುಪಿ, ಜ.9: ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಸರ್ವಜ್ಞ ಪೀಠಾರೋಹಣದ ಪ್ರಯುಕ್ತ ಜ.10ರಂದು ಹಮ್ಮಿಕೊಳ್ಳಲಾದ ಪುರ ಪ್ರವೇಶ ಮತ್ತು ಪೌರ ಸಮ್ಮಾನ ಸಮಾರಂಭವನ್ನು ಸರಕಾರದ ಕೋವಿಡ್ ಮಾರ್ಗಸೂಚಿ ಹಾಗೂ ಸ್ವಾಮೀಜಿಯ ಅಪೇಕ್ಷೆಯಂತೆ ಅತ್ಯಂತ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆಂದು ಪರ್ಯಾಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಕೃಷ್ಣಾಪುರ ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಂಜೆ 3ಗಂಟೆಗೆ ಜೋಡುಕಟ್ಟೆಗೆ ಆಗಮಿಸಲಿ ರುವ ಸ್ವಾಮೀಜಿ, ಪೂರ್ಣಪ್ರಜ್ಞ ಮಂಟಪದಲ್ಲಿ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಲಿರುವರು. ಬಳಿಕ ಪಟ್ಟದ ದೇವರನ್ನು ಸ್ವರ್ಣ ಪಾಲಕಿ ಯಲ್ಲಿಟ್ಟು ಅದರ ಹಿಂಭಾಗದಲ್ಲಿ ಅಲಂಕೃತ ವಾಹನದಲ್ಲಿ ಸಾಂಪ್ರದಾಯಿಕ ಬಿರುದಾವಳಿ, ವಾದ್ಯ ಚಂಡೆ ವಾದನ ಸಹಿತ ಗಣ್ಯರ ಸಮ್ಮುಖದಲ್ಲಿ ಸರಳ ಶೋಭಾಯಾತ್ರೆಯಲ್ಲಿ ಸ್ವಾಮೀಜಿಯನ್ನು ಕೃಷ್ಣ ಮಠಕ್ಕೆ ಬರಮಾಡಿಕೊಳ್ಳಲಾಗು ವುದು. ಈ ಶೋಭಾಯಾತ್ರೆಯಲ್ಲಿ ಯಾವುದೇ ಟ್ಯಾಬ್ಲೋಗಳು ಮತ್ತು ಕಲಾ ತಂಡಗಳು ಇರುವುದಿಲ್ಲ ಎಂದರು.
ಕೃಷ್ಣಮಠಕ್ಕೆ ಆಗಮಿಸುವ ಸ್ವಾಮೀಜಿ, ಕೃಷ್ಣ ಮುಖ್ಯ ಪ್ರಾಣರ ದರ್ಶನ ಪಡೆಯಲಿರುವರು. ಬಳಿಕ ಪರ್ಯಾಯ ಅದಮಾರು ಮಠಾಧೀಶರ ಅಧ್ಯಕ್ಷತೆ ಯಲ್ಲಿ ಸಂಜೆ 6ಗಂಟೆಗೆ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಉಡುಪಿ ನಗರ ಸಭೆ ಮತ್ತು ಪರ್ಯಾಯೋತ್ಸವ ಸಮಿತಿ ಸಹಯೋಗದಲ್ಲಿ ಸ್ವಾಮೀಜಿಗೆ ನಾಗರಿಕ ಅಭಿನಂದನೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯ ಲಿದೆ. ಒಟ್ಟಾರೆ ಕಾರ್ಯಕ್ರಮವನ್ನು 300 ಮಂದಿ ಮಾತ್ರ ಸೀಮಿತಗೊಳಿ ಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣ ಉಪಾ ಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಕೋಶಾಧಿಕಾರಿ ರವಿಪ್ರಸಾದ್, ಪ್ರೊ.ಕೆ.ಶ್ರೀಶ ಆಚಾರ್ಯ, ಜಯಪ್ರಕಾಶ ಕೆದ್ಲಾಯ, ಬಿ. ಸುಪ್ರಸಾದ್ ಶೆಟ್ಟಿ, ಬಿ.ವಿ.ಲಕ್ಷ್ಮೀನಾರಾಯಣ, ಕೆ.ಗಣೇಶ ರಾವ್, ವಾಸುದೇವ ಭಟ್ ಪೆರಂಪಳ್ಳಿ, ಕೊಟ್ಟಾರಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
‘ಸ್ವಾಮೀಜಿ ಇತರರಿಂದ ಗೌರವ ಸ್ವೀಕರಿಸಲ್ಲ’
ಪೌರ ಸಮ್ಮಾನ ಸಮಾರಂಭದಲ್ಲಿ ನಗರಸಭೆ ಮತ್ತು ಪರ್ಯಾಯೋತ್ಸವ ಸಮಿತಿಯನ್ನು ಹೊರತು ಪಡಿಸಿ ಉಳಿದ ವೈಯಕ್ತಿಕ ಹಾಗೂ ಸಂಘಸಂಸ್ಥೆಗಳಿಂದ ಸ್ವಾಮೀಜಿ ಸನ್ಮಾನ ಸ್ವೀಕರಿಸುವುದಿಲ್ಲ ಎಂದು ರಘುಪತಿ ಭಟ್ ತಿಳಿಸಿದರು.
ಆದುದರಿಂದ ಸಮಾರಂಭಕ್ಕೆ ಬರುವವರು ಯಾರು ಕೂಡ ಹಾರ, ಶಾಲು ತಂದು ಸ್ವಾಮೀಜಿಗೆ ಹಾಕಬಾರದು. ಕೋವಿಡ್ ನಿಯಮಾವಳಿಯ ಹಿನ್ನೆಲೆಯಲ್ಲಿ ಸ್ವಾಮೀಜಿ ಈ ಮನವಿ ಮಾಡಿದ್ದಾರೆ. ಇದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸ ಲಾಗುವುದು ಎಂದರು.
ವೀಕೆಂಡ್ಗೆ ಹೊರೆಕಾಣಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಇರಲ್ಲ!
ಜ.11ರಂದು ಮಧ್ಯಾಹ್ನ 3ಗಂಟೆಗೆ ಜೋಡುಕಟ್ಟೆಯಲ್ಲಿ ಹೊರಕಾಣಿಕೆ ಮೆರ ವಣಿಗೆಗೆ ಚಾಲನೆ ನೀಡಲಾಗುವುದು. ಮೊದಲ ದಿನ ಶ್ರೀಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯಿಂದ ಹೊರೆಕಾಣಿಕೆ ನಡೆಯಲಿದೆ. ಹೊರೆಕಾಣಿಕೆ ಮೆರ ವಣಿಗೆಯನ್ನು ರದ್ದುಪಡಿಸಿ, ವಾಹನಗಳಲ್ಲಿಯೇ ಹೊರೆಕಾಣಿಕೆಯನ್ನು ಸಲ್ಲಿಸ ಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪರ್ಯಾಯ ಮಹೋತ್ಸವದ ಹೊರೆ ಕಾಣಿಕೆ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಶನಿವಾರ ಮತ್ತು ರವಿವಾರ ದಿನ ಇರುವುದಿಲ್ಲ. ಈ ಹೊರೆಕಾಣಿಕೆ ಮೆರವಣಿಗೆ ಬದಲಿ ದಿನ ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.