ನಾರಾಯಣ ಗುರು ಸ್ತಬ್ಧಚಿತ್ರ ವಿಚಾರ; ವಾಸ್ತವಾಂಶ ಜನರ ಮುಂದಿಡಲು ಆಗ್ರಹ
Update: 2022-01-16 14:01 GMT
ಮಂಗಳೂರು, ಜ.16: ಗಣರಾಜ್ಯೋತ್ಸವದ ಪರೇಡ್ಗೆ ಕೇರಳ ರಾಜ್ಯದಿಂದ ಪ್ರಸ್ತಾವಿಸಲಾದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ವಾಸ್ತವಾಂಶವನ್ನು ಜನರ ಮುಂದಿಡಬೇಕೆಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಆಗ್ರಹಿಸಿದ್ದಾರೆ.
ದಾರ್ಶನಿಕರಾದ ನಾರಾಯಣಗುರು ಸರ್ವರಲ್ಲಿ ಸಮಾನತೆಯನ್ನು ಕಂಡವರು. ಜಾತಿ-ಭೇದವನ್ನು ಮೀರಿ ಮಹಾನ್ ಗುರುಗಳಾಗಿ ಮೆರೆದವರು. ಇಂತಹ ಗುರುವನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಶೋಭೆಯಲ್ಲ. ಕೂಡಲೇ ಕೇಂದ್ರ ಸರಕಾರ ಸತ್ಯಾಂಶವನ್ನು ದೇಶದ ಜನರ ಮುಂದಿಟ್ಟು ಗೊಂದಲ ನಿವಾರಣೆ ಮಾಡಬೇಕು. ಒಂದು ವೇಳೆ ದುರುದ್ದೇಶಪೂರ್ವಕವಾಗಿ ನಾರಾಯಣ ಗುರುಗಳ ಮೂರ್ತಿಯನ್ನು ತಿರಸ್ಕಾರ ಮಾಡಿದ್ದರೆ ಖಂಡನೀಯ ಎಂದು ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.