ಕಾರು ಅಪಘಾತ: ಮಹಾರಾಷ್ಟ್ರದ ಬಿಜೆಪಿ ಶಾಸಕನ ಪುತ್ರ ಸಹಿತ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತ್ಯು

Update: 2022-01-25 04:55 GMT
Photo: Twitter 

ವಾರ್ಧಾ (ಮಹಾರಾಷ್ಟ್ರ): ಮಹಾರಾಷ್ಟ್ರದ ಸೆಲ್ಸೂರ ಬಳಿ ಸೋಮವಾರ ರಾತ್ರಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ತಿರೋರಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಾಂಗ್‌ದಾಲೆ ಅವರ ಪುತ್ರ ಆವಿಷ್ಕರ್ ರಹಾಂಗ್‌ದಾಲೆ ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ವಿದ್ಯಾರ್ಥಿಗಳು ಡಿಯೋಲಿಯಿಂದ ವಾರ್ಧಾಗೆ ಕಾರಿನಲ್ಲಿ ತೆರಳುತ್ತಿದ್ದಾಗ ನಿನ್ನೆ ರಾತ್ರಿ 11.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ವಾರ್ಧಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಳ್ಕರ್ ತಿಳಿಸಿದ್ದಾರೆ.

ಮೃತಪಟ್ಟವರನ್ನು ವಾರ್ಧಾದ ಸಾವಂಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ನೀರಜ್ ಚೌಹಾಣ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್ ಮತ್ತು ಶುಭಂ ಜೈಸ್ವಾಲ್ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರೆ, ಆವಿಷ್ಕರ್  ರಹಾಂಗ್‌ದಾಲೆ ಮತ್ತು ಪವನ್ ಶಕ್ತಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದರು. ನಿತೇಶ್ ಸಿಂಗ್ ವೈದ್ಯಕೀಯ ಇಂಟರ್‌ನ್ ಆಗಿದ್ದರು.

ಘಟನೆಯಿಂದ ಸಾವನ್ನಪ್ಪಿರುವ ವಿದ್ಯಾರ್ಥಿಗಳ ಸಂಬಂಧಿಕರಿಗೆ ಪಿಎಂಎನ್ ಆರ್ ಎಫ್ ನಿಂದ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ  ಘೋಷಿಸಿದರು. ಘಟನೆಯಿಂದ ಗಾಯಗೊಂಡವರಿಗೆ ಪಿಎಂಎನ್ ಆರ್ ಎಫ್ ನಿಂದ ಪರಿಹಾರವಾಗಿ ತಲಾ 50,000 ರೂ. ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News