ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ಮಂದಿರ: ಭರವಸೆ ನೀಡಿದ ಬಿಜೆಪಿ

Update: 2022-01-28 02:09 GMT

ಆಗ್ರಾ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಥುರಾದಲ್ಲಿ ಶೇಕಡ 80ರಷ್ಟು ಜನಸಂಖ್ಯೆ ಇರುವ ಹಿಂದೂಗಳನ್ನು ಓಲೈಸಲು ಬಿಜೆಪಿ ಮುಂದಾಗಿದ್ದು, ಭವ್ಯವಾದ ಕೃಷ್ಣ ಜನ್ಮಭೂಮಿ ಮಂದಿರವನ್ನು ಈ ನಗರದಲ್ಲಿ ನಿರ್ಮಿಸುವ ಭರವಸೆ ನೀಡಿದೆ.

ಮಥುರಾ- ವೃಂದಾವನ ಕೃಷ್ಣ ಸರ್ಕ್ಯೂಟ್‌ನ ಸುತ್ತಮುತ್ತಲ ಪ್ರದೇಶಗಳ ಎಲ್ಲ ಬಿಜೆಪಿ ಮುಖಂಡರು, "ಅಯೋಧ್ಯೆ ಹಾಗೂ ಕಾಶಿ ಯಶಸ್ಸಿನ ಬಳಿಕ" ಇದೀಗ ಮಥುರಾದಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಸಂದರ್ಭ ಎಂಬ ಹೇಳಿಕೆ ನೀಡುತ್ತಿದ್ದಾರೆ.

ತಳಹಂತದಲ್ಲಿ ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಈ ಧ್ರುವೀಕರಣದ ವಿಚಾರ ಬಿಜೆಪಿಯ ಮತ ಗಳಿಕೆಗೆ ನೆರವಾಗಲಿದೆ ಎಂದು ಅಲ್ಪಸಂಖ್ಯಾತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಶಾಂತಿಗೆ ಭಂಗ ಬಾರದಿದ್ದರೆ, ಯಾವುದೇ ಸಮಸ್ಯೆ ಇಲ್ಲ ಎಂಬ ಅಭಿಪ್ರಾಯವನ್ನು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ವ್ಯಕ್ತಪಡಿಸಿದ್ದಾರೆ.

"ಈ ಸಮಸ್ಯೆ ಎಲ್ಲೆಡೆ ಇದ್ದರೂ, ಮಥುರಾದ ಜನತೆ ಅಮೂಲ್ಯ ಕೋಮುಸಾಮರಸ್ಯ ಕಾಪಾಡಿಕೊಂಡು ಬಂದಿದ್ದಾರೆ" ಎಂದು ಸಂಕಲ್ಪ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ರೈಝುದ್ದೀನ್ ರಜು ಹೇಳುತ್ತಾರೆ.

ಈ ಧಾರ್ಮಿಕ ನಗರದ ಬಹುತೇಕ ಮಂದಿಗೆ ಕೃಷ್ಣ ದೇವಸ್ಥಾನ ವಿಚಾರ ರಾಜಕೀಯ ಉದ್ದೇಶದ್ದು ಎನ್ನುವುದು ಮನವರಿಕೆಯಾಗಿದೆ. ಆದರೆ ಈ ಭವ್ಯ ದೇಗುಲ ನಿರ್ಮಾಣವಾದಲ್ಲಿ ಅಯೋಧ್ಯೆಯಂತೆ ಆರ್ಥಿಕ ಅಭಿವೃದ್ಧಿಗಳು ನಗರದಲ್ಲಿ ಆಗುತ್ತವೆ ಎನ್ನುವ ನಂಬಿಕೆ ಅವರದ್ದು. ಬಿಜೆಪಿ ಮುಖಂಡರ ಇತ್ತೀಚಿನ ಹೇಳಿಕೆ ಮಂದಿರದ ನಿರೀಕ್ಷೆ ಹುಟ್ಟುಹಾಕಿದೆ. ಈ ಭಾವನಾತ್ಮಕ ವಿಷಯದ ಬಗ್ಗೆ ಬಿಜೆಪಿ ರಾಜಕೀಯ ಆಟ ಆಡುತ್ತಿದೆ ಎನ್ನುವುದು ನಮಗೆ ಗೊತ್ತು. ಆದರೆ ಬಿಜೆಪಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಭರವಸೆ ಈಡೇರಿಸಿದೆ. ನಗರದಲ್ಲಿ ಕೃಷ್ಣ ಮಂದಿರ ಕೂಡಾ ನಿರ್ಮಾಣವಾಗಿ ಇದು ನಿಧಾನವಾಗಿ ಸಾಯುತ್ತಿರುವ ನಗರದ ಪುನರುತ್ಥಾನಕ್ಕೆ ಕಾರಣವಾಗಬಹುದು. ಈ ತಾಣ ಬೃಹತ್ ತೀರ್ಥಯಾತ್ರಾ ತಾಣವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದು ಮನೀಶ್ ಜಿಂದಾಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News