ನಟ ದಿಲೀಪ್ ವಿರುದ್ಧ ʼಮರುತನಿಖೆ ಆರಂಭಗೊಳ್ಳಲುʼ ಕಾರಣವಾದ ನಿರ್ದೇಶಕನ ವಿರುದ್ಧ ಅತ್ಯಾಚಾರ ದೂರು

Update: 2022-02-05 12:25 GMT

ಕೊಚ್ಚಿ: ನಟ ದಿಲೀಪ್ ವಿರುದ್ಧ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ  ಆರಂಭಗೊಳ್ಳಲು ನಿರ್ದೇಶಕ ಪಿ ಬಾಲಚಂದ್ರ ಕುಮಾರ್ ಅವರು ಬಹಿರಂಗಗೊಳಿಸಿದ ವಿಚಾರಗಳು ಕಾರಣವಾಗಿದ್ದರೆ ಇದೀಗ ಕಣ್ಣೂರಿನ ಮಹಿಳೆಯೊಬ್ಬರು ಬಾಲಚಂದ್ರ ವಿರುದ್ಧ  ಅತ್ಯಾಚಾರ ಆರೋಪ ಹೊರಿಸಿದ್ದಾರೆ.

ತನ್ನ ವಕೀಲರೊಡಗೂಡಿ ದೂರುದಾರೆ  ಕೊಚ್ಚಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಇಂದು ತೆರಳಿ ದೂರು ಸಲ್ಲಿಸಿದ್ದಾರೆ. ಪುತ್ತುಕಲವತ್ತೊಮ್  ಎಂಬಲ್ಲಿನ ಮನೆಯಲ್ಲಿ ಬಾಲಚಂದ್ರ ಕುಮಾರ್ 2011ರಲ್ಲಿ ತನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಈ 40 ವರ್ಷದ ಮಹಿಳೆ ಆರೋಪಿಸಿದ್ದಾರೆ. ತ್ರಿಶ್ಶೂರಿನ ರೆಸ್ಟಾರೆಂಟ್ ಒಂದರಲ್ಲಿ ತಾನು ಭೇಟಿಯಾದ ವ್ಯಕ್ತಿಯೊಬ್ಬ ಚಿತ್ರೋದ್ಯಮದಲ್ಲಿ ಉದ್ಯೋಗ ಕುರಿತು ವಿಚಾರಿಸಲು ಬಾಲಚಂದ್ರ ಅವರ ದೂರವಾಣಿ ಸಂಖ್ಯೆ ನೀಡಿದ್ದರು, ಅವರನ್ನು ಸಂಪರ್ಕಿಸಿ ಚಿತ್ರದಲ್ಲಿ ಅವಕಾಶ ನೀಡಲು ಕೋರಿದ ಕೆಲವು ತಿಂಗಳ ನಂತರ ಅವರು ಕೊಚ್ಚಿಯ ಪುದುಕಲವತ್ತಮ್ ಎಂಬಲ್ಲಿ ಸಂಗೀತ ನಿರ್ದೇಶಕರೊಬ್ಬರ ಮನೆಗೆ ಬರುವಂತೆ ಹೇಳಿದ್ದು ಅಲ್ಲಿಗೆ ಆಗಮಿಸಿದಾಗ ತನ್ನನ್ನು ಮೇಲಿನಂತಸ್ತಿಗೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂದು ಆಕೆ ಆರೋಪಿಸಿದ್ದಾರೆ. ಈ ಘಟನೆಯ ವೀಡಿಯೋ ಸೆರೆ ಹಿಡಿದಿದ್ದರಿಂದ ದೂರು ನೀಡಲು ಹಿಂಜರಿದಿದ್ದಾಗಿ ಆಕೆ ಹೇಳಿದ್ದಾರೆ.

ಬಾಲಚಂದ್ರ ಕುಮಾರ್ ಸಭ್ಯನಂತೆ ಟಿವಿ ವಾಹಿನಿಗಳಲ್ಲಿ ಮಾತನಾಡುವುದನ್ನು ನೋಡಿ ದೂರು ನೀಡಲು ನಿರ್ಧರಿಸಿದ್ದಾಗಿ ಆಕೆ ಹೇಳಿದ್ದಾರೆ. ಬಾಲಚಂದ್ರ ವಿರುದ್ಧ ಶೀಘ್ರ ದೂರು ದಾಖಲಿಸಿ ವಿಚಾರಣೆಗಾಗಿ ಕರೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News