ಸಿಖ್ಖರ ಸಮವಸ್ತ್ರ, ರುಮಾಲುಗಳಿಗೆ ಸಮಸ್ಯೆಯಿಲ್ಲ, ಆದರೆ ಹಿಜಾಬ್ ಸಮಸ್ಯೆಯಾಗುವುದು ಹೇಗೆ?: ನಟಿ ಸೋನಂ ಕಪೂರ್ ಪ್ರಶ್ನೆ
ಹೊಸದಿಲ್ಲಿ: "ಸಿಖ್ಖರ ಶಿರವಸ್ತ್ರ ಅಥವಾ ರುಮಾಲು ಅವರ ಆಯ್ಕೆಯಾಗಬಹುದಾದರೆ ಹಿಜಾಬ್ ಏಕಿಲ್ಲ ಎಂದು ಬಾಲಿವುಡ್ ನಟಿ ಸೋನಂ ಕಪೂರ್ ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಸೋನಂ, ರುಮಾಲು ಧರಿಸಿದ ಸಿಖ್ ವ್ಯಕ್ತಿ ಹಾಗೂ ಹಿಜಾಬ್ ಧರಿಸಿದ ಮಹಿಳೆಯ ಫೋಟೋಗಳನ್ನು ಶೇರ್ ಮಾಡಿ ಮೇಲಿನಂತೆ ಪ್ರಶ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಾಯಕ್ಕೊಳಗಾಗಿರುವ ವಿದ್ಯಾರ್ಥಿನಿಯರ ಪರ ಧ್ವನಿಯೆತ್ತಿದ್ದಕ್ಕೆ ಹಲವು ಸಾಮಾಜಿಕ ತಾಣ ಬಳಕೆದಾರರು ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಕೂಡ ಈ ಹಿಜಾಬ್ ವಿವಾದ ಖಂಡಿಸಿ "ನಾನು ಯಾವತ್ತೂ ಹಿಜಾಬ್ ಅಥವಾ ಬುರ್ಖಾ ಪರ ಆಗಿರಲಿಲ್ಲ. ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಆದರೆ ಅದೇ ಸಮಯ ಈ ಕೆಲವು ಗುಂಪುಗಳು ಹುಡುಗಿಯರ ಒಂದು ಸಣ್ಣ ಗುಂಪನ್ನು ಬೆದರಿಸಲು ನಡೆಸಿದ ವಿಫಲ ಯತ್ನವನ್ನು ಖಂಡಿಸುತ್ತೇನೆ. ಇದು ಅವರ ಪುರುಷತ್ವದ ಪರಿಕಲ್ಪನೆಯೇ?-ಕನಿಕರ ಪಡಬೇಕು,'' ಎಂದು ಬರೆದಿದ್ದಾರೆ.