ಅಂಗವಿಕಲ ಯುವತಿಯ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ, ಬೆಂಕಿ ಹಚ್ಚಿ ಹತ್ಯೆ

Update: 2022-02-20 03:22 GMT

ಹೈದರಾಬಾದ್: ಅಂಗವಿಕಲ ಯುವತಿಯೊಬ್ಬಳು ಪ್ರಿಯಕರನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ ಆಕೆಯನ್ನು ಬೆಂಕಿ ಹಚ್ಚಿ ಕೊಂದಿದ್ದಾಗಿ ಆಪಾದಿಸಲಾಗಿದೆ. ಶುಕ್ರವಾರ ತಡರಾತ್ರಿ ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಗಳು ಮೆಹಬೂಬನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಸುಟ್ಟಗಾಯಗಳಾಗಿದ್ದ ಯುವತ ಶನಿವಾರ ಕೊನೆಯುಸಿರೆಳೆದಳು.

ಅತ್ಯಾಚಾರ ಹಾಗೂ ಕೊಲೆ ಆರೋಪ ದಾಖಲಿಸಿ, ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ ಎಂದು ನಾರಾಯಣಪೇಟೆ ಜಿಲ್ಲೆಯ ಕೊಸ್ಗಿ ಸರ್ಕಲ್ ಇನ್‌ಸ್ಪೆಕ್ಟರ್ ಜೆ.ಜನಾರ್ಧನ್ ಗೌಡ್ ಹೇಳಿದ್ದಾರೆ. ಸಂತ್ರಸ್ತೆ ಯುವತಿ ಮದ್ದೂರು ಮಂಡಲದ ತಿಮ್ಮಾರೆಡ್ಡಿ ಪಲ್ಲಿ ಗ್ರಾಮದವರಾಗಿದ್ದು, ಹಲವು ತಿಂಗಳಿಂದ ತನ್ನ ಮಲತಾಯಿ ಜತೆ ರಾಜೇಂದ್ರನಗರದಲ್ಲಿ ವಾಸವಿದ್ದಳು. ತಂದೆ ಹಾಗೂ ಮಲತಾಯಿ ಇಬ್ಬರೂ ಕೂಲಿ ಕಾರ್ಮಿಕರು.

ಫೆಬ್ರುವರಿ 13ರಂದು ಸಂತ್ರಸ್ತೆ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬದವರು ದೂರು ನೀಡಿ, ಪ್ರಿಯಕರ ವೆಂಕಟರಾಮ್‌ನ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದ್ದರು. ನಾಪತ್ತೆ ಪ್ರಕರಣ ದಾಖಲಾಗಿದ್ದು, ಯುವತಿಯ ಪತ್ತೆಗೆ ಪ್ರಯತ್ನ ನಡೆದಿತ್ತು.

ಏತನ್ಮಧ್ಯೆ ಶುಕ್ರವಾರ ಈಕೆಯನ್ನು ಗಂಭೀರ ಸುಟ್ಟಗಾಯಗಳೊಂದಿಗೆ ಅಪರಿಚಿತ ವ್ಯಕ್ತಿಗಳು ಮೆಹಬೂಬನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ಕೈಗೊಂಡಿದ್ದರು. ಯುವತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವುದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News