ಪೊಲೀಸರು ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಸಬೇಕು: ನ್ಯಾ.ಸುಬ್ರಮಣ್ಯ
ಉಡುಪಿ, ಫೆ.25: ಪೊಲೀಸರು ಕರ್ತವ್ಯ ನಿರ್ವಹಣೆ ಸಮಯದಲ್ಲಿ ಯಾವುದೇ ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್. ಸುಬ್ರಮಣ್ಯ ಹೇಳಿದ್ದಾರೆ.
ಶುಕ್ರವಾರ ನಗರದ ಪೊಲೀಸ್ ಕಲಾಯತ್ ಚಂದು ಮೈದಾನದಲ್ಲಿ, ಉಡುಪಿ ಪೊಲೀಸ್ ತರಬೇತಿ ಶಾಲೆಯ 13ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಶುಕ್ರವಾರ ನಗರದ ಪೊಲೀಸ್ ಕಲಾಯತ್ ಚಂದು ಮೈದಾನದಲ್ಲಿ, ಉಡುಪಿ ಪೊಲೀಸ್ ತರಬೇತಿ ಶಾಲೆಯ 13ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡುತಿದ್ದರು. ಪೊಲೀಸರು ಯಾವುದೇ ಒತ್ತಡ, ಪ್ರಲೋಭನೆಗಳಿಗೆ ಒಳಗಾಗದೇ ಸಂಯಮದಿಂದ, ಕಾನೂನಿನಡಿಯಲ್ಲಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವಂತೆ ಹೇಳಿದ ಜಿಲ್ಲಾ ನ್ಯಾಯಾಧೀಶರು, ಸೇವಾವಧಿಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಉನ್ನತ ಗುರಿ ಇಟ್ಟುಕೊಂಡು ಪರಿಶ್ರಮದಿಂದ ಕಾರ್ಯ ನಿರ್ವಹಿಸಿ. ಬಿಡುವಿನ ವೇಳೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಪ್ರಯತ್ನಿಸುವಂತೆ ಪ್ರಶಿಕ್ಷಣಾರ್ಥಿಗಳಿಗೆ ಅವರು ತಿಳಿಸಿದರು.
ತರಬೇತಿ ಅವಧಿಯಲ್ಲಿ ಹೊರಾಂಗಣ, ಗುರಿ ಅಭ್ಯಾಸ, ಒಳಾಂಗಣ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಿಎಆರ್ ಮಂಡ್ಯ ಜಿಲ್ಲೆಯ ಆಕಾಶ ಎನ್.ಎಸ್. ಇವರು ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿ ಪಡೆದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪೆರೇಡ್ ನಡೆಯಿತು. ನಂತರ ಪ್ರತಿಜ್ಞಾ ವಿಧಿ ಬೋೀಧಿಸಲಾಯಿತು.ಉಡುಪಿಯಲ್ಲಿ ಇದುವರೆಗೆ ನಡೆದ ತರಬೇತಿಯಲ್ಲಿ 6 ಸಶಸ್ತ್ರ ಮೀಸಲು, 5 ಸಿವಿಲ್, ಒಂದು ರೈಲ್ವೆ ಮತ್ತು ಒಂದು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗಳ 13 ತಂಡಗಳ ಒಟ್ಟು 1218 ಮಂದಿಗೆ ತರಬೇತಿ ನೀಡಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಸ್ವಾಗತಿಸಿದರು. ಎಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ ವರದಿ ವಾಚನ ಮಾಡಿದರು. ಕುಂದಾಪುರ ಉಪವಿಭಾಗದ ಪೊಲೀಸ್ಉಪಾಧೀಕ್ಷಕ ಶ್ರೀಕಾಂತ್ ವಂದಿಸಿದರು. ಕರಾವಳಿ ಕಾವಲು ಪೊಲೀಸ್ನ ಉಪನಿರೀಕ್ಷಕ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಿಕ್ಷಣಾರ್ಥಿಗಳ ಪೋಷಕರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ತರಬೇತಿದಾರರಲ್ಲಿ 18 ಮಂದಿ ಇಂಜಿನಿಯರಿಂಗ್ ಪದವೀಧರರು
ಉಡುಪಿ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 13 ನೇ ತಂಡದಲ್ಲಿ 100 ಪ್ರಶಿಕ್ಷಣಾರ್ಥಿಗಳಿದ್ದು, ಇವರಲ್ಲಿ ಎಸೆಸೆಲ್ಸಿ 4, ಪಿಯುಸಿ 20, ಡಿಪ್ಲೋಮಾ 1, ಪದವೀಧರರು 49, ಸ್ನಾತಕ ಪದವೀಧರರು 8 ಮತ್ತು 18 ಮಂದಿ ಇಂಜಿನಿಯರಿಂಗ್ ವಿದ್ಯಾರ್ಹತೆ ಪಡೆದಿದ್ದು, 11 ಮಂದಿ ಮಾಜಿ ಸೈನಿಕರು ಇದ್ದಾರೆ.
ಇವರಲ್ಲಿ 25 ಮಂದಿ ಕೋಲಾರ, 16 ಮಂದಿ ಬೆಂಗಳೂರು ಗ್ರಾಮಾಂತರ, 14 ಮಂದಿ ಚಿಕ್ಕಬಳ್ಳಾಪುರ, 12 ಮಂದಿ ಬೀದರ್, ದಕ್ಷಿಣ ಕನ್ನಡ 7, ಮಂಡ್ಯ 6, ಚಿತ್ರದುರ್ಗ 6, ಚಾಮರಾಜನಗರ 6, ಬೆಳಗಾವಿ 4, ಯಾದಗಿರಿ 2, ತುಮಕೂರು 2 ಜಿಲ್ಲೆಯವರಿದ್ದಾರೆ.