ದಿಲ್ಲಿ ಹಿಂಸಾಚಾರ ಪ್ರಕರಣದ ಸಾಕ್ಷಿಯನ್ನು ಪರದೆ ಬಳಸಿ ಎಲ್ಲರಿಂದ ಅಡಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ವಕೀಲರು !

Update: 2022-02-25 14:33 GMT

ಹೊಸದಿಲ್ಲಿ: ಅಪರೂಪದ ವಿದ್ಯಮಾನವೊಂದರಲ್ಲಿ, ದಿಲ್ಲಿಯ ನ್ಯಾಯಾಲಯದ ಕಲಾಪ ಕೊಠಡಿಯನ್ನು ಪರದೆಯೊಂದನ್ನು ಬಳಸಿ ಇಬ್ಭಾಗಗೊಳಿಸಿದ ನಂತರ 2020 ಈಶಾನ್ಯ ದಿಲ್ಲಿ ಮತೀಯ ಹಿಂಸಾಚಾರ ಸಂಬಂಧಿತ ಕೊಲೆ ಪ್ರಕರಣವೊಂದರ ಏಕೈಕ ಸಾಕ್ಷಿಯೊಬ್ಬರನ್ನು ಅಲ್ಲಿ ಗುರುವಾರ ಹಾಜರುಪಡಿಸಲಾಯಿತು. ಈ ಕಾರಣದಿಂದಾಗಿ ಕೋರ್ಟಿನ ಇನ್ನೊಂದು ಪ್ರತ್ಯೇಕಿತ ಭಾಗದಲ್ಲಿದ್ದ ಪ್ರತಿವಾದಿ ವಕೀಲರು, ಸಾರ್ವಜನಿಕ ಅಭಿಯೋಜಕರು ಮತ್ತು ಪೊಲೀಸ್ ಸಿಬ್ಬಂದಿಗೆ ಸಾಕ್ಷಿಯನ್ನು ನೋಡುವುದು ಸಾಧ್ಯವಾಗಿಲ್ಲ.

ಆರೋಪಿ ಕಟಕಟೆಯಲ್ಲಿ ನಿಂತ ಕಡೆಯೂ ಒಂದು ಪರದೆ ಹಾಕಲಾಗಿತ್ತು. ಕರವಾಲ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣದ ಆರು ಆರೋಪಿಗಳ ಪೈಕಿ ಇಬ್ಬರ ಪರ ಹಾಜರಿದ್ದ ವಕೀಲ ಮೆಹಮೂದ್ ಪ್ರಾಚ, ಈ ಕುರಿತು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ "ದಿಲ್ಲಿ ಹಿಂಸಾಚಾರ ಪ್ರಕರಣದ ಸಾಕ್ಷಿಯೊಬ್ಬರನ್ನು ಈ ರೀತಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಅವರ ಹೇಳಿಕೆ ಪಡೆದುಕೊಂಡಿದ್ದು ಇದೇ ಮೊದಲ ಬಾರಿ, ಆದರೆ ಕಾನೂನಿನನ್ವಯ ಈ ರೀತಿ ಸಾಕ್ಷಿಯನ್ನು ಪರದೆಯ ಹಿಂದಿನಿಂದ ಹಾಜರುಪಡಿಸಲು ಅವಕಾಶವಿಲ್ಲ, ಪ್ರತಿವಾದಿ ವಕೀಲರಲ್ಲಿ ಕೆಲವರು ಇದೇ ವಿಚಾರ ಮುಂದಿಟ್ಟರು ಹಾಗೂ ಅದನ್ನು ಕಲಾಪದಲ್ಲಿ ದಾಖಲಿಸಿಕೊಳ್ಳಬೇಕು" ಎಂದಿದ್ದಾರೆ.

ಸಾಕ್ಷಿಯನ್ನು ಈ ರೀತಿ ಏಕೆ ಹಾಜರುಪಡಿಸಲಾಯಿತು ಎಂಬುದಕ್ಕೆ ನ್ಯಾಯಾಲಯದಲ್ಲಿ ಕಾರಣವನ್ನೂ ನೀಡಲಾಗಿಲ್ಲ.

ಸಾಕ್ಷಿ ಅಜಿತ್ ತೋಮರ್ ಮೂರು ಕೊಲೆ ಪ್ರಕರಣಗಳಲ್ಲಿ ಏಕೈಕ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿದ್ದಾನೆ ಎಂದು ಪ್ರಾಚ ಹೇಳಿದ್ದಾರೆ. ಒಂದು ಪ್ರಕರಣ ಸಂಬಂಧ ಆತನನ್ನು ಮೇಲೆ ತಿಳಿಸಿದ ರೀತಿಯಲ್ಲಿ ಗುರುವಾರ ಹಾಜರುಪಡಿಸಲಾಗಿದೆ.  ಈ ನಿರ್ದಿಷ್ಟ ಪ್ರಕರಣ ದಿನೇಶ್ ಎಂಬಾತನ ಸಾವಿಗೆ ಸಂಬಂಧಿಸಿದ್ದಾಗಿದ್ದು ಆತ ಗುಂಡೇಟಿನ ಗಾಯಗಳಿಂದ ಜಿಟಿಬಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಪ್ರಕರಣದ ಚಾರ್ಜ್‍ಶೀಟ್ ಜೂನ್ 16, 2020ರಂದು ಸಲ್ಲಿಸಲಾಗಿತ್ತು.

"ಈ ರೀತಿ ಪರದೆ ಹಾಕಿ ಸಾಕ್ಷಿಗಳನ್ನು ಹಾಜರುಪಡಿಸಲು ಯುಎಪಿಎ ಅಡಿ ಅವಕಾಶವಿದ್ದರೂ ಅದಕ್ಕೂ ನಿರ್ದಿಷ್ಟ ಆದೇಶ ಬೇಕಿದೆ ಹಾಗೂ ಕಾನೂನು ಈ ಕುರಿತು ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಈ ರೀತಿ ಗುರುವಾರ ಮಾಡಿರುವುದು ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆ ಬಗ್ಗೆ ಪ್ರಶ್ನಿಸುವಂತಾಗುತ್ತದೆ ಹಾಗೂ ಪ್ರತಿವಾದಿ ವಕೀಲನಾಗಿ ನನಗೆ ಕೂಡ ಪರದೆಯಾಚೆ ಯಾರಿದ್ದರೆಂದು ತಿಳಿಯುವುದಿಲ್ಲ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News