ಮಧ್ಯಪ್ರದೇಶ: ಅಂಗನವಾಡಿ ದತ್ತು ತೆಗೆದುಕೊಂಡ ತೃತೀಯ ಲಿಂಗಿಗಳು
ಭೋಪಾಲ, ಫೆ. 26: ಮಧ್ಯಪ್ರದೇಶ ಜಿಲ್ಲೆಯ ಪನ್ನಾದ ಅಂಗನವಾಡಿಯನ್ನು ದತ್ತು ತೆಗೆದುಕೊಂಡ ತೃತೀಯ ಲಿಂಗಿಗಳ ಗುಂಪೊಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಶಂಶೆಗೆ ಒಳಗಾಗಿದೆ.
‘‘ರಾಜ್ಯದ ಸುಧಾರಿತ ಬುಂಧೇಲಖಂಡ ವಲಯದ ಪನ್ನಾ ಜಿಲ್ಲೆಯಲ್ಲಿರುವ 17ನೇ ಸಂಖ್ಯೆಯ ಅಂಗನವಾಡಿ ಕೇಂದ್ರವನ್ನು ಕೆಲವು ತೃತೀಯ ಲಿಂಗಿಗಳು ದತ್ತು ತೆಗೆದುಕೊಂಡಿದ್ದಾರೆ’’ ಎಂದು ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ‘‘ಕಿನ್ನಾರ ಸಮಾಜ (ತೃತೀಯ ಲಿಂಗಿಗಳು) ಅಂಗನವಾಡಿಯನ್ನು ದತ್ತು ತೆಗೆದುಕೊಂಡಿರುವುದು ಪ್ರಶಂಸನೀಯ ಹಾಗೂ ಅದ್ಭುತ’’ ಎಂದು ಚೌಹಾನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತೃತೀಯ ಲಿಂಗಿಗಳ ಉದಾತ್ತ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ, ಅವರ ಸಾಧನೆ ಸೌಲಭ್ಯಗಳನ್ನು ಸುಧಾರಿಸಲು ನೆರವಾಗಲಿದೆ ಎಂದರು. ಕಳೆದ ತಿಂಗಳು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್, ಅಂಗನವಾಡಿ ಕೇಂದ್ರಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬರುವಂತೆ ಜನರಲ್ಲಿ ಮನವಿ ಮಾಡಿದ್ದರು.