ಎನ್ಡಿಟಿವಿ ಮೂಲಕ ಇಡೀ ವಿಶ್ವವೇ ನನ್ನನ್ನು ನೋಡಿದೆ: ಕೀವ್ನಲ್ಲಿ ಗಾಯಗೊಂಡಿರುವ ಭಾರತೀಯ ವಿದ್ಯಾರ್ಥಿ
ಕೀವ್,ಮಾ.4: ಕಳೆದ ರವಿವಾರ ರಾತ್ರಿ ಉಕ್ರೇನ್ ರಾಜಧಾನಿ ಕೀವ್ನಿಂದ ಪಾರಾಗುವ ಯತ್ನದಲ್ಲಿ ದಿಲ್ಲಿ ಮೂಲದ ಭಾರತೀಯ ವಿದ್ಯಾರ್ಥಿ
ಅವರು ಗುಂಡೇಟುಗಳಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು,ಅವರ ಕಾಲಿನ ಮೂಳೆ ಮುರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಆ್ಯಂಬುಲನ್ಸ್ ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗೂ ರಸ್ತೆಯಲ್ಲಿಯೇ ಬಿದ್ದುಕೊಂಡಿದ್ದರು.
ಕೀವ್ ಸಿಟಿ ಹಾಸ್ಪಿಟಲ್ನಿಂದ ಎನ್ಡಿಟಿವಿ ಜೊತೆ ಮಾತನಾಡಿದ ಸಿಂಗ್,‘ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆ ’ಎಂದು ತಿಳಿಸಿದರು. ಮನೆಗೆ ಮರಳಲು ಮತ್ತು ತನ್ನ ಕುಟುಂಬವನ್ನು ಭೇಟಿಯಾಗಲು ಕಾತುರರಾಗಿರುವ ಅವರು ತನ್ನನ್ನು ಉಕ್ರೇನ್ನಿಂದ ಹೊರಗೆ ಸಾಗಿಸುವುದನ್ನು ಕಾಯುತ್ತಿದ್ದಾರೆ. ಆದರೆ ಅಧಿಕಾರಿಗಳೊಂದಿಗೆ ತನ್ನ ಮಾತುಕತೆಗಳು ನಿರಾಶಾದಾಯಕವಾಗಿವೆ ಎಂದು ಸಿಂಗ್ ಹೇಳಿದರು.
‘ಕೀವ್ ನಿಲ್ದಾಣದಲ್ಲಿ ರೈಲು ಹತ್ತಲು ನಮಗೆ ಅವಕಾಶ ನೀಡಿರಲಿಲ್ಲ, ಹೀಗಾಗಿ ಲಿವ್ ತಲುಪಲು ನಾನು ಮತ್ತು ಸ್ನೇಹಿತರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿದ್ದೆವು. ನಾವು ಲಿವ್ಗೆ ಪ್ರಯಾಣಿಸುತ್ತಿದ್ದಾಗ ಹಲವಾರು ಜನರು ಟ್ಯಾಕ್ಸಿಯತ್ತ ಗುಂಡುಗಳನ್ನು ಹಾರಿಸಿದ್ದರು. ಒಂದು ಗುಂಡು ನನ್ನ ಭುಜವನ್ನು ಹೊಕ್ಕಿತ್ತು. ನನ್ನ ಎದೆಯಲ್ಲಿ ಸಿಕ್ಕಿಕೊಂಡಿದ್ದ ಗುಂಡನ್ನು ಹೊರತೆಗೆಯಲಾಗಿದೆ. ನನ್ನ ಕಾಲು ಮುರಿದಿದೆ,ಮಂಡಿಯಲ್ಲಿಯೂ ಒಂದು ಗುಂಡು ಇತ್ತು’ಎಂದ ಸಿಂಗ್,‘ಲಿವ್ ತಲುಪಲು ನನಗೆ ನೆರವಿನ ಅಗತ್ಯವಿತ್ತು. ಆದರೆ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಎನ್ಡಿಟಿವಿ ಮಾತ್ರ ನನ್ನನ್ನು ತಲುಪಿದೆ. ಏನು ನಡೆಯುತ್ತಿದೆ ಎನ್ನುವ ವಾಸ್ತವ ಈಗ ಇಡೀ ಜಗತ್ತಿಗೆ ಗೊತ್ತಾಗಲಿದೆ ’ಎಂದರು.
‘ನಾನು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನನಗೆ ನಡೆಯಲಾಗುತ್ತಿಲ್ಲ,ನನ್ನನ್ನು ಕಿವ್ಗೆ ಸಾಗಿಸಲು ನೆರವಾಗುವಂತೆ ಕೋರಿದ್ದೆ. ಆದರೆ ಅವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ನನ್ನ ಪ್ರವರವನ್ನು ಪದೇ ಪದೇ ಹೇಳುವಂತಾಗಿತ್ತು. ಅವರು ಸುಳ್ಳು ಹೇಳಿಕೆಗಳನ್ನು ನೀಡುತ್ತಲೇ ಇದ್ದರು ’ಎಂದ ಸಿಂಗ್, ಕೀವ್ನಲ್ಲಿ ಇನ್ನೂ ಹಲವಾರು ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿಸಿದರು. ‘ಅವರೆಲ್ಲ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅದರೆ ಅಧಿಕಾರಿಗಳು ನಮಗಿಂತ ಮೊದಲೇ ಲಿವ್ ತಲುಪಿಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಇಲ್ಲಿಯೇ ಇದ್ದು ವಿದ್ಯಾರ್ಥಿಗಳಿಗೆ ನೆರವಾಗಬೇಕಿತ್ತು ’ಎಂದರು.