ಪಂಜಾಬ್ ನಲ್ಲಿ ಸೇನಾ ಸಹೋದ್ಯೋಗಿಯಿಂದಲೇ ಗುಂಡೇಟು: ದಾಳಿಕೋರ ಸೇರಿದಂತೆ ಐವರು ಬಿಎಸ್ಎಫ್ ಸೈನಿಕರು ಮೃತ್ಯು
Update: 2022-03-06 07:51 GMT
ಹೊಸದಿಲ್ಲಿ: ಪಂಜಾಬ್ನ ಅಮೃತಸರದಲ್ಲಿ ಇಂದು ಬೆಳಗ್ಗೆ ಸೈನಿಕನೋರ್ವ ತನ್ನ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ದಾಳಿ ನಡೆಸಿದವ ಸೇರಿದಂತೆ ಐವರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದಾತನನ್ನು ಕ್ಯಾಪ್ಟನ್ ಸತ್ತೆಪ್ಪ ಎಸ್ ಕೆ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸಿಬ್ಬಂದಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ndtv.com ವರದಿ ಮಾಡಿದೆ.
ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಅಟ್ಟಾರಿ-ವಾಘಾ ಗಡಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸತ್ಯಾಂಶ ತಿಳಿಯಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ವರದಿ ತಿಳಿಸಿದೆ.