ಕಂಬಾಲಪಲ್ಲಿಯ ದಲಿತರನ್ನು ಕೊಂದವರು ಯಾರು?

Update: 2022-03-11 05:20 GMT

ಹೆಚ್ಚೂ ಕಡಿಮೆ ದಲಿತರ ಕಗ್ಗೊಲೆಗಳು ರಸ್ತೆ ಅಪಘಾತದಷ್ಟೂ ನೋವುಂಟು ಮಾಡದಂತಹ ಸಮಾಜದಲ್ಲಿ ಕಂಬಾಲಪಲ್ಲಿಯ ನೆನಪು ಬಹುಶಃ ಯಾರಿಗೂ ಇಲ್ಲವೆನಿಸುತ್ತದೆ. ಮಹಾಮರೆವಿನ ಮಹಾನಾಟಕದಲ್ಲಿ ದಲಿತರೂ ‘‘ಹಿಂದೂ ನಾವೆಲ್ಲ ಒಂದು’’ ಎಂದು ಬೀಗುತ್ತಿದ್ದಾರೆ. 


ದಿನಾಂಕ ಮಾರ್ಚ್ 11, 2000. ದಲಿತ ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ ಮತ್ತೊಂದು ಕರಾಳ ದಿನವಾಗಿದೆ. ಆ ದಿನ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿಯಲ್ಲಿ ಏಳು ದಲಿತರನ್ನು ರೆಡ್ಡಿ ಭೂಮಾಲಕರು ಸುಟ್ಟು ಕೊಂದಿದ್ದರು. ಇಂದಿಗೆ 22 ವರ್ಷ ಉರುಳಿ ಹೋದವು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ದಲಿತರ ಜನಸಂಖ್ಯೆ ಹೆಚ್ಚಿದೆ. ಜೊತೆಗೆ ಅಲ್ಲಿನ ಮೇಲ್ಜಾತಿ ಭೂಮಾಲಕರ ಫ್ಯೂಡಲ್ ಮನಸ್ಥಿತಿ ಆಂಧ್ರದ ರಾಯಲಸೀಮೆಯ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ. 1974ನೇ ಇಸವಿಯಲ್ಲಿ ಮುಳಬಾಗಿಲ ಬಳಿ ದಲಿತ ಮುನಿವೆಂಕಟಪ್ಪನನ್ನು ಮೇಲ್ಜಾತಿಯ ಕೆಲವು ರೆಡ್ಡಿ ಭೂಮಾಲಕರು ಕೊಲೆ ಮಾಡಿದ್ದರು. ಇದಕ್ಕೆ ಕಾರಣ ಆ ಯುವಕ ಪಿಯುಸಿಯಲ್ಲಿ ಉತ್ತೀರ್ಣನಾಗಿದ್ದು! 1975ರಲ್ಲಿ ನಲ್ಲಗುಟ್ಟಹಳ್ಳಿಯ ದಲಿತ ಹೆಂಗಸನ್ನು ಅವಳ ಗಂಡನೆದುರೇ ಒಬ್ಬ ಬ್ರಾಹ್ಮಣನೂ ಸೇರಿದಂತೆ ಐವರು ಒಕ್ಕಲಿಗರು ಅತ್ಯಾಚಾರ ಮಾಡಿದ್ದರು. ಈ ಎರಡೂ ಅಮಾನವೀಯ ಘಟನೆಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸಿಡಿದೆದ್ದು ನಿಂತಿತು. ಅಲ್ಲಿಯವರೆಗೆ ಒಕ್ಕಲಿಗರಂತಹ ಮೇಲ್ಜಾತಿಗಳ ಹೊಲಗಳಲ್ಲಿ ಜೀತ ಮಾಡುತ್ತಿದ್ದ ದಲಿತರ ಮಕ್ಕಳೇ ಮೇಲ್ಜಾತಿ ಭೂಮಾಲಕರ ವಿರುದ್ಧ ಹೋರಾಟ ಕಟ್ಟಿದರು. ಮೊತ್ತ ಮೊದಲ ಬಾರಿಗೆ ಮೇಲ್ಜಾತಿಗಳ ವಿರುದ್ಧ ದಲಿತರು ಕೇಸು ದಾಖಲಿಸಿದರು. ನ್ಯಾಯಾಲಯದಲ್ಲಿ ದಲಿತರಿಗೆ ಸೋಲುಂಟಾಯಿತಾದರೂ ಫ್ಯೂಡಲ್ ಮನಸ್ಥಿತಿಗೆ ಒಂದು ರೀತಿಯ ಭಯ ಹುಟ್ಟಿಸುವಲ್ಲಿ ದಲಿತ ಚಳವಳಿ ಯಶಸ್ವಿಯಾಯಿತು. ದಲಿತ ಚಳವಳಿ ಆರಂಭಿಸಿದ ಭೂ ಹೋರಾಟಗಳು ಸಹ ಭೂಮಾಲಕರ ಕಣ್ಣು ಕುಕ್ಕಿದವು. ಶೇಷಗಿರಿಯಪ್ಪನ ಕೊಲೆ-ಅನುಸೂಯಮ್ಮನ ಅತ್ಯಾಚಾರ ವಿರುದ್ಧದ ಹೋರಾಟ, ನಾಗಸಂದ್ರ ಭೂಹೋರಾಟ ದಲಿತ ಸಂಘರ್ಷ ಸಮಿತಿಯ ಪ್ರಾಬಲ್ಯವನ್ನು ಇಡೀ ನಾಡಿಗೆ ಸಾರಿದವು.

ಹೀಗಿರುವಾಗ 1997ರಲ್ಲಿ ಬಿಲ್ಲಾಂಡ್ಲಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿಯ ಘಟಕ ಸ್ಥಾಪನೆ ಹಾಗೂ ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲು ಮುಂದಾದಾಗ ಅಲ್ಲಿಯ ಒಕ್ಕಲಿಗ ಯುವ ವೇದಿಕೆ ವಿರೋಧಿಸಿತು. ಪೊಲೀಸರು ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಕಾರ್ಯಕ್ರಮ ರದ್ದಾಗಿಸಿದರು. ಆದರೆ ಅಂದು ಅಲ್ಲಿ ರಕ್ಷಣೆ ಕೊಡಲು ಬಂದಿದ್ದ ನಾಲ್ವರು ಪೊಲೀಸರನ್ನೇ ಮೇಲ್ಜಾತಿ ಯುವಕರು ಕೊಂದು ಹಾಕಿದರು. ಈ ಭೀಕರ ಕೊಲೆಗೆ ಯಾರಿಗೂ ಶಿಕ್ಷೆಯಾಗಲಿಲ್ಲ. ಪೊಲೀಸರನ್ನೇ ಕೊಂದು ಜಯಿಸಿಕೊಂಡವರೆಂದು ಬೀಗಿದ ಮೇಲ್ಜಾತಿ ಜನರಲ್ಲಿ ಅಹಂ ಮೂಡಿತು. ಕಾನೂನು ಸಹ ತಮ್ಮನ್ನೇನು ಮಾಡದು ಎಂದರಿತರು. ನಂತರ ಜಾತಿಕಟ್ಟಳೆಗಳನ್ನು ಮೀರಿ ನಿಲ್ಲಲು ಪ್ರಯತ್ನಿಸುತ್ತಿದ್ದ ದಲಿತ ಯುವಕರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಈ ಸೇಡಿಗೆ ಬಲಿಯಾದದ್ದೇ ಕಂಬಾಲಪಲ್ಲಿಯ ದಲಿತ ಕುಟುಂಬ.

ಕಂಬಾಲಪಲ್ಲಿಯಲ್ಲಿ ನೆಲೆಸಿದ್ದ ವೆಂಕಟರಾಯಪ್ಪನ ಕುಟುಂಬದ ಮೇಲೆ ಮೇಲ್ಜಾತಿಗಳ ಕಣ್ಣು ಬಿದ್ದಿತ್ತು. ವೆಂಕಟರಾಯಪ್ಪನ ಇಬ್ಬರು ಗಂಡು ಮಕ್ಕಳಾದ ವೆಂಕಟರಮಣಪ್ಪ, ಅಂಜಿನಪ್ಪಮತ್ತು ಶ್ರೀರಾಮಪ್ಪಮೂವರೂ ವಿದ್ಯಾವಂತರು. ಅಂಜಿನಪ್ಪಶಿಕ್ಷಕರು. ಶ್ರೀರಾಮಪ್ಪಪದವಿ ಓದುತ್ತಿದ್ದನು. 1997ರಲ್ಲಿ ಒಕ್ಕಲಿಗ ಹಾಗೂ ದಲಿತರ ಕುರಿಗಳು ಕಳ್ಳತನವಾಗಿದ್ದವು. ಈ ಕಳ್ಳತನವನ್ನು ವೆಂಕಟರಮಣಪ್ಪಸೇರಿದಂತೆ ಮೂವರು ದಲಿತರ ಮೇಲೆ ಆರೋಪಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ನೆರವಿನಿಂದ ಕುರಿಗಳನ್ನು ಪತ್ತೆ ಹಚ್ಚುವಲ್ಲಿ ವೆಂಕಟರಮಣಪ್ಪ ಯಶಸ್ವಿಯಾದ. ನಿಜವಾಗಿ ಆ ಕುರಿಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದವರು ಮದ್ದಿರೆಡ್ಡಿ ಮತ್ತು ಇತರ ಒಕ್ಕಲಿಗರೇ ಆಗಿದ್ದರು. ಈ ಘಟನೆಯಿಂದ ಕಂಬಾಲಪಲ್ಲಿಯ ಒಕ್ಕಲಿಗರಿಗೆ ಅವಮಾನವುಂಟಾಗಿ ದಲಿತರ ಮೇಲೆ ಸೇಡು ಬೆಳೆಯಿತು. ಈ ಮಧ್ಯೆ ಒಂದು ದಿನ ವೆಂಕಟರಮಣಪ್ಪ ಕೊಲೆಯಾಗಿ ಹೋದರು. ಈ ಕೊಲೆ ಯಾರು ಮಾಡಿದ್ದರೆಂಬುದು ಎಲ್ಲರಿಗೂ ತಿಳಿದಿತ್ತಾದರೂ ನ್ಯಾಯ ಸಿಗಲಿಲ್ಲ. ಎಲ್ಲಾ ಆರೋಪಿಗಳೂ ಸಾಕ್ಷಿ ಇಲ್ಲದೆ ಖುಲಾಸೆಯಾಗಿ ಹೋದರು.

ಮಾರ್ಚ್ 10, 2000ದಂದು ವೆಂಕಟರೆಡ್ಡಿ ಮತ್ತು ದಲಿತ ಶಂಕರಪ್ಪನ ನಡುವೆ ಟಿವಿಎಸ್ ಮೋಟಾರು ಸೈಕಲ್‌ಗೆ ದಾರಿ ಬಿಡುವ ವಿಚಾರದಲ್ಲಿ ಜಗಳವಾಯಿತು. ಶಂಕರಪ್ಪನಿಗೆ ಒಕ್ಕಲಿಗರ ಗುಂಪೊಂದು ಥಳಿಸಿತು. ಪೊಲೀಸರಿಗೆ ಫೋನ್ ಮಾಡಲಾಗಿ ಮೀಸಲು ಪಡೆ ಕಂಬಾಲಪಲ್ಲಿಗೆ ಬಂದಿತ್ತು. ಮಾರ್ಚ್ 11, 2000ದಂದು ಇದರ ವಿರುದ್ಧ ದೂರು ಸಲ್ಲಿಸಲು ಚಿಂತಾಮಣಿಗೆ ಶ್ರೀರಾಮಪ್ಪನ ಸಮೇತ ಕೆಲವು ದಲಿತರು ತೆರಳಿದ್ದರು. ಹಾಗೆಯೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದು ಅಂದು ಸಂಜೆ ಕಂಬಾಲಪಲ್ಲಿಗೆ ಹಿಂದಿರುಗಿದಾಗ ದಲಿತರ ಬರುವಿಗಾಗಿಯೇ ಕಾಯುತ್ತಿದ್ದ ಒಕ್ಕಲಿಗರ ತಂಡವೊಂದು ಅವರ ಮೇಲೆ ಮುಗಿಬಿದ್ದಿದೆ. ಈ ಜಗಳದಲ್ಲಿ ಕೃಷ್ಣಾರೆಡ್ಡಿ ಎಂಬ ನೀರುಗಂಟಿ ನಿಧನರಾಗುತ್ತಾರೆ. ಈ ಕೊಲೆಯನ್ನು ದಲಿತರ ತಲೆಗೆ ಕಟ್ಟಲಾಯಿತು. ನಂತರ ಗುಂಪು ಕಟ್ಟಿಕೊಂಡು ದಲಿತರ ಕೇರಿಗೆ ಹೋದ ಒಕ್ಕಲಿಗರು ವೆಂಕಟರಾಯಪ್ಪನ ಮನೆಗೆ ಹೊರಗಡೆಯಿಂದ ಬೀಗ ಹಾಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮವಾಗಿ ಮನೆಯೊಳಗಿದ್ದ ಶ್ರೀರಾಮಪ್ಪ, ಅಂಜಿನಪ್ಪ, ರಾಮಕ್ಕ, ಸುಬ್ಬಕ್ಕ, ಪಾಪಮ್ಮ, ನರಸಿಂಹಯ್ಯ, ಚಿಕ್ಕಪಾಪಣ್ಣ ಎಂಬ ಏಳು ಜೀವಗಳು ಸುಟ್ಟು ಕರಕಲಾಗಿ ಹೋದವು. ರಾತ್ರೋ ರಾತ್ರಿ ಅಲ್ಲಿನ ದಲಿತರು ಜೀವ ಉಳಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಎತ್ತೆತ್ತಲೋ ಓಡಿ ಹೋಗಿದ್ದರು. ಇವರ ಪೈಕಿ ತನ್ನ ಕುಟುಂಬದ ಐವರನ್ನು ಕಳೆದುಕೊಂಡ ವೆಂಕಟರಾಯಪ್ಪನೂ ಇದ್ದನು. ಆಶ್ಚರ್ಯಪಡುವ ವಿಚಾರವೆಂದರೆ ಅಲ್ಲಿರಬೇಕಿದ್ದ ಪೊಲೀಸ್ ಮೀಸಲು ಪಡೆಯನ್ನು ಆ ಸಂಜೆಯೇ ಪೊಲೀಸ್ ಅಧಿಕಾರಿಗಳು ವಾಪಸ್ ಕರೆಸಿಕೊಂಡಿದ್ದು. ಅಂದು ಪೊಲೀಸ್ ಮೀಸಲು ಪಡೆ ಅಲ್ಲಿದ್ದಿದ್ದರೆ ಯಾವುದೇ ಕಾರಣಕ್ಕೂ ಕಂಬಾಲಪಲ್ಲಿಯಲ್ಲಿ ದಲಿತರ ಮಾರಣಹೋಮ ನಡೆಯುತ್ತಿರಲಿಲ್ಲ.

ಈ ಭೀಕರ ನರಮೇಧದ ವಿರುದ್ಧ ಇಡೀ ದೇಶವೇ ಮರುಗಿತು. ಪ್ರಜ್ಞಾವಂತ ಒಕ್ಕಲಿಗರೂ ಸೇರಿದಂತೆ ಮನುಷ್ಯತ್ವವುಳ್ಳವರೆಲ್ಲ ಸ್ಪಂದಿಸಿದರು. ಆದರೆ ಸರಕಾರ, ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ತನ್ನ ಎಂದಿನ ಮೇಲ್ಜಾತಿ ಒಲವನ್ನು ಬಹಿರಂಗವಾಗಿಯೇ ತೋರ್ಪಡಿಸಿತು. ವಿಪರ್ಯಾಸವೆಂದರೆ ಈ ಘಟನೆ ನಡೆದಾಗ ಗೃಹಮಂತ್ರಿಯಾಗಿದ್ದವರು ಮಲ್ಲಿಕಾರ್ಜುನ ಖರ್ಗೆಯವರು. ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಸಬ್‌ಇನ್‌ಸ್ಪೆಕ್ಟರ್‌ಗಳೂ ದಲಿತರೇ! ಆದರೆ ಇವರ ಮೇಲೆ ಆದೇಶ ನೀಡುವವರು ಬಹುತೇಕ ಒಕ್ಕಲಿಗ ರಾಜಕಾರಣಿಗಳಾಗಿದ್ದರು. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಚಿಂತಾಮಣಿ ಶಾಸಕ, ಜಿಲ್ಲೆಯಲ್ಲಿನ ಏಳು ಶಾಸಕರೂ ಒಕ್ಕಲಿಗರೇ ಆಗಿದ್ದರು. ಕಂಬಾಲಪಲ್ಲಿ ನರಮೇಧದ ನಂತರ ಒಂದೇ ವಾರದಲ್ಲಿ ಒಕ್ಕಲಿಗ ನಾಯಕರೆಲ್ಲ ಚಿಂತಾಮಣಿಯನ್ನು ಬಂದ್ ಮಾಡಿದರು. ಅದಕ್ಕವರು ನೀಡಿದ ಕಾರಣ ದಲಿತರು ನೀರಗಂಟಿ ಕೃಷ್ಣಾರೆಡ್ಡಿಯನ್ನು ಕೊಲೆ ಮಾಡಿದ್ದರೆಂಬುದಾಗಿತ್ತು. ಏಳು ಜನ ದಲಿತರನ್ನು ಕೊಂದದ್ದಕ್ಕೆ ಅವರಲ್ಲಿ ಕಿಂಚಿತ್ತು ಪಶ್ಚಾತ್ತಾಪವೂ ಇರಲಿಲ್ಲ. ಕೇವಲ ಜಾತಿಗೋಸ್ಕರ ಅನ್ಯಾಯದ ಪರ ನಿಂತಿದ್ದರು.

ಪೊಲೀಸ್ ಕೇಸ್ ದಾಖಲಾಯಿತು. ಸೋನಿಯಾಗಾಂಧಿ, ರಾಮ್ ವಿಲಾಸ್ ಪಾಸ್ವಾನ್, ಶರದ್ ಯಾದವ್ ಮುಂತಾದ ರಾಷ್ಟ್ರೀಯ ನಾಯಕರೆಲ್ಲರೂ ಬಂದು ಹೋದರು. ಆದರೆ ಅವರೆಲ್ಲರೂ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾದರು. ಜೊತೆಗೆ ಅಂದು ವಿರೋಧ ಪಕ್ಷದಲ್ಲಿದ್ದ ಜೆಡಿಎಸ್, ಬಿಜೆಪಿ ಸಹ ಗಟ್ಟಿಯಾಗಿ ವಿರೋಧಿಸಲಿಲ್ಲ. ದಲಿತರ ಪರವಾಗಿ ನಿಲ್ಲಲಿಲ್ಲ. ಹೈಕೋರ್ಟ್ ವಕೀಲರಾದ ಬಿ.ಟಿ. ವೆಂಕಟೇಶ್‌ರವರು ಹೇಳುವುದನ್ನು ಕೇಳಿದರೆ ಎಂತಹವರಿಗೂ ಎದೆ ಜಲ್ಲೆನ್ನುತ್ತದೆ. ಈ ವ್ಯವಸ್ಥೆಯ ಮೇಲೆ ಅಸಹ್ಯ ಉಂಟಾಗುತ್ತದೆ. ಅವರು ಗುರುತಿಸುವಂತೆ ಕಂಬಾಲಪಲ್ಲಿಯ ಕೇಸಿನ ತನಿಖೆಯಾಗಲೀ, ವಿಚಾರಣೆಯಾಗಲೀ ಆ ಕೇಸನ್ನು ನ್ಯಾಯಾಂಗ ವ್ಯವಸ್ಥೆ ನಡೆಸಿಕೊಂಡಿರುವುದಾಗಲೀ ತೀರ ಬೇಜವಾಬ್ದಾರಿತನದ್ದು. ಒಂದಷ್ಟು ಉದಾಹರಣೆ ಹೇಳುವುದಾದರೆ, ಕಂಬಾಲಪಲ್ಲಿ ಪ್ರಕರಣದ ವಿಚಾರಣೆಯಲ್ಲಿ ಘಟನೆ ನಡೆದ ದಿನ ಹಾಜರಿದ್ದ ಪೊಲೀಸ್ ಪೇದೆಗಳನ್ನು ವಿಚಾರಣೆ ಮಾಡಿಲ್ಲ. ಆ ಕೇಸಿನ ತನಿಖಾಧಿಕಾರಿಯ ವಿಚಾರಣೆ ಮಾಡಿಲ್ಲ. ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿಲ್ಲ. ಸಾಕ್ಷಿಗಳು ಪೊಲೀಸರ ಸಮಕ್ಷಮದಲ್ಲಿ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದರ ಕಾರಣವನ್ನು ಕೇಳಿಲ್ಲ. ಅದಲ್ಲದೆ ಕೋರ್ಟ್ ದಾಖಲೆಗಳಲ್ಲಿ ಎಲ್ಲಾ ಸಾಕ್ಷಿಗಳ ಹೇಳಿಕೆಯೂ ಒಂದೇ ಆಗಿದೆ. ಅದೆಷ್ಟರ ಮಟ್ಟಿಗೆಂದರೆ ಒಂದು ಅಕ್ಷರವೂ ವ್ಯತ್ಯಾಸವಾಗದಂತೆ ಹೇಳಿಕೆ ನೀಡಿದ್ದಾರೆ. ಅಂದರೆ ಟೈಪ್ ಮಾಡುವವರು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ.

ಈ ಪ್ರಕರಣದ ಮುಖ್ಯ ಸಾಕ್ಷಿ ವೆಂಕಟರಾಯಪ್ಪನ ಭಾಷೆ ತೆಲುಗು ಆಗಿದ್ದು ಆತನ ಸಹಾಯಕ್ಕೆ ನೇಮಿಸಲಾಗಿದ್ದ ಭಾಷಾಂತರಕಾರನ ನೇಮಕ ನಿಯಮಗಳ ಪ್ರಕಾರ ಆಗಿಲ್ಲ. ತಿಂಗಳ ನಂತರ ನಡೆದ ವಿಚಾರಣೆಯಲ್ಲಿ ವೆಂಕಟರಾಯಪ್ಪನಿಗೆ ಭಾಷಾಂತರಕಾರನನ್ನೇ ನೇಮಿಸಿಲ್ಲ. ಅಂದರೆ ತಿಂಗಳಲ್ಲಿ ಕನ್ನಡ ಕಲಿತು ಬಿಟ್ಟಿದ್ದಾನೆ! ತನಿಖೆ ಮಾಡುವಾಗ ಯಾವುದೇ ಮಾರಕಾಸ್ತ್ರ, ವಸ್ತುಗಳ ಮಹಜರು ಮಾಡಿಲ್ಲ! ಆದರೆ ಕಂಬಾಲಪಲ್ಲಿಯ ದಲಿತರ ಮೇಲೆ ಆರೋಪಿಸಿ ಹೂಡಿರುವ ಕೃಷ್ಣಾರೆಡ್ಡಿಯ ಕೇಸಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ವಿಚಾರಿಸಲಾಗಿದೆ. ಹೀಗೆ ತನಿಖೆಯಲ್ಲಿ ಮತ್ತು ವಿಚಾರಣೆಯಲ್ಲಿ ಹಲವಾರು ಲೋಪದೋಷಗಳನ್ನು ಈ ಕೇಸ್ ಹೊಂದಿತ್ತು. ಮೇಲ್ನೋಟಕ್ಕೆ ಇವೆಲ್ಲವೂ ಬೇಕಂತಲೇ ಮಾಡಿದ್ದವಾಗಿದ್ದವು.

2006ರವರೆಗೆ ವಿಚಾರಣೆ ನಡೆಸಿದ ಕೋಲಾರ ಸೆಷನ್ ಕೋರ್ಟ್ ಸಾಕ್ಷಿಗಳ ಕೊರತೆಯಿಂದಾಗಿ ಎಲ್ಲಾ 46 ಆರೋಪಿಗಳನ್ನೂ ಖುಲಾಸೆಗೊಳಿಸಿತು. ವಿಚಾರಣೆಯ ವೇಳೆ ತಮ್ಮ ಸ್ವಂತ ಕುಟುಂಬದ ವ್ಯಕ್ತಿಗಳನ್ನು ಕಳೆದುಕೊಂಡಿದ್ದವರೇ ತದ್ವಿರುದ್ಧ ಹೇಳಿಕೆಯನ್ನು ನೀಡಿದರು. ಸಾಕ್ಷಿಗಳನ್ನು ಬೆದರಿಸಿ, ಅವರಿಗೆ ಹಣ ನೀಡಿ ಸುಳ್ಳು ಸಾಕ್ಷಿ ಹೇಳಿಸುವಲ್ಲಿ ಮೇಲ್ಜಾತಿ ಫ್ಯೂಡಲ್ ಮನಸ್ಸುಗಳು ಯಶಸ್ವಿಯಾದವು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೂ ಇದೇ ಬೇಕಿತ್ತು. 2012ರಲ್ಲಿ ಹೈಕೋರ್ಟ್‌ನಲ್ಲಿಯೂ ಆರೋಪಿಗಳೆಲ್ಲ ಸಾಕ್ಷಿಗಳ ಕೊರತೆಯಿಂದ ಖುಲಾಸೆಗೊಂಡರು. 2013ರಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕೆಲವೇ ದಿನಗಳಲ್ಲಿ ತೆಲಂಗಾಣದ ಸಮರ್ಥ ವಕೀಲರಾದ ಎಂ.ಎನ್.ರಾವ್ ಅವರನ್ನು ದಲಿತರ ಪರವಾಗಿ ವಾದಿಸಲು ನೇಮಿಸಿರುವುದಾಗಿ ಸುದ್ದಿಗಳು ಬಂದವು. ಇಲ್ಲಿಗೆ 9 ವರ್ಷಗಳಾಯಿತು. ಆದರೂ ಸುಪ್ರೀಂ ಕೋರ್ಟ್ ಕಂಬಾಲಪಲ್ಲಿಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ. ಜಸ್ಸಿಕಾ ಲಾಲ್ ಹಾಗೂ ಬೆಸ್ಟ್ ಬೇಕರಿ ಪ್ರಕರಣಗಳಂತೆ ಮರು ವಿಚಾರಣೆ ಮಾಡಬಾಹುದಾ? ಗೊತ್ತಿಲ್ಲ. 2019ರಲ್ಲಿ ವೆಂಕಟರಾಯಪ್ಪಸಹ ತೀರಿಕೊಂಡರು. ಬದುಕಿದ್ದಷ್ಟು ದಿನ ನ್ಯಾಯಕ್ಕಾಗಿ ಹಪಹಪಿಸುತ್ತಿದ್ದ ಜೀವ ಅದೊಂದೇ ಎನಿಸುತ್ತದೆ. ದುರಂತವೆಂದರೆ ಬದನವಾಳು ಘಟನೆ ಬಿಟ್ಟರೆ ಕರ್ನಾಟಕದ ಇನ್ಯಾವ ದಲಿತರ ಮಾರಣಹೋಮಕ್ಕೂ ನ್ಯಾಯ ದೊರಕಿಲ್ಲ. ಇದು ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕುವೆಂಪು ನಾಡಿನ ಸ್ಥಿತಿ. ಅಂದು ಕಂಬಾಲಪಲ್ಲಿಯ ಹಿಂಸಾಕಾಂಡಕ್ಕೆ ನ್ಯಾಯ ದೊರಕಿದ್ದರೆ ನಂತರ ನಾಗಲಾಪಲ್ಲಿ, ಖೈರ್ಲಾಂಜಿಯಂತಹ ಭೀಕರ ಘಟನೆಗಳು ನಡೆಯುತ್ತಿರಲಿಲ್ಲ.

ಕಂಬಾಲಪಲ್ಲಿಯ ಕತೆ ಇಲ್ಲಿಗೆ ಬಂದು ನಿಂತಿದೆ. ಹೆಚ್ಚೂ ಕಡಿಮೆ ದಲಿತರ ಕಗ್ಗೊಲೆಗಳು ರಸ್ತೆ ಅಪಘಾತದಷ್ಟೂ ನೋವುಂಟು ಮಾಡದಂತಹ ಸಮಾಜದಲ್ಲಿ ಕಂಬಾಲಪಲ್ಲಿಯ ನೆನಪು ಬಹುಶಃ ಯಾರಿಗೂ ಇಲ್ಲವೆನಿಸುತ್ತದೆ. ಮಹಾಮರೆವಿನ ಮಹಾನಾಟಕದಲ್ಲಿ ದಲಿತರೂ ‘‘ಹಿಂದೂ ನಾವೆಲ್ಲ ಒಂದು’’ ಎಂದು ಬೀಗುತ್ತಿದ್ದಾರೆ. ಅವರ ಆತ್ಮಗಳಿಗೆ ಶಾಂತಿ ಸಿಗಲಿ.

Writer - ವಿಕಾಸ್ ಆರ್. ಮೌರ್ಯ

contributor

Editor - ವಿಕಾಸ್ ಆರ್. ಮೌರ್ಯ

contributor

Similar News