ಇಂದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಮನಮೋಹನ್ ಸಿಂಗ್, ಇತರ ನಾಲ್ವರು ಗೈರು?
ಹೊಸದಿಲ್ಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಚರ್ಚಿಸಲು ರವಿವಾರ ಸಂಜೆ ಕರೆದಿರುವ ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸುವುದಿಲ್ಲ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.
89 ವರ್ಷದ ಡಾ. ಸಿಂಗ್ ಅವರು ಅನಾರೋಗ್ಯದ ಕಾರಣ ಸಭೆಗೆ ಹಾಜರಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿಂಗ್ ಹೊರತುಪಡಿಸಿ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹಾಗೂ ಇತರ ಮೂವರು ಹಿರಿಯ ನಾಯಕರು ಪಕ್ಷದ ಪ್ರಮುಖ ಸಭೆಗೆ ಗೈರುಹಾಜರಾಗುವ ನಿರೀಕ್ಷೆಯಿದೆ.
ಸಂಜೆ 4 ಗಂಟೆಗೆ ನಡೆಯಲಿರುವ ಸಭೆಗೆ ಕಾಂಗ್ರೆಸ್ನ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ.
ಇಂದು ಬೆಳಗ್ಗೆ ಸೋನಿಯಾ ಗಾಂಧಿ ಅವರ ಮನೆಯಲ್ಲಿ ನಡೆದ ಪಕ್ಷದ ಕಾರ್ಯತಂತ್ರ ಸಭೆಯಲ್ಲಿ ಡಾ.ಸಿಂಗ್ ಹಾಜರಾಗಿರಲಿಲ್ಲ. ನಾಳೆ ಪುನರಾರಂಭಗೊಳ್ಳುವ ಸಂಸತ್ತಿನ ಬಜೆಟ್ ಅಧಿವೇಶನದ ಕಾರ್ಯತಂತ್ರದ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರದ ಗುಂಪಿನ ಸಭೆಯನ್ನು ಕರೆಯಲಾಗಿದೆ.
ಸೋನಿಯಾ ಗಾಂಧಿ ಅವರ ಮನೆಯಲ್ಲಿ ರವಿವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಕೆ. ಸುರೇಶ್ ಮತ್ತು ಜೈರಾಮ್ ರಮೇಶ್ ಉಪಸ್ಥಿತರಿದ್ದರು.