ಮಣಿಪಾಲ: ಮಾ.17ರಿಂದ ಸತ್ಯಜಿತ್ ರೇ ಚಲನಚಿತ್ರೋತ್ಸವ
ಉಡುಪಿ : ಭಾರತದ ಸರ್ವಶ್ರೇಷ್ಠ ಚಿತ್ರ ನಿರ್ದೇಶಕರೆಂದೇ ಪರಿಗಣಿಸಲ್ಪಟ್ಟಿರುವ ಸತ್ಯಜಿತ್ ರೇ (೧೯೨೧-೨೦೨೧) ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಮಾ.೧೭ರಿಂದ ೧೯ರವರೆಗೆ ಮೂರು ದಿನಗಳ ಕಾಲ ‘ರೇ ಚಲನಚಿತ್ರೋತ್ಸವ’ವನ್ನು ಮಣಿಪಾಲ ದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರೋತ್ಸವ ಮಣಿಪಾಲದಲ್ಲಿರುವ ಪ್ಲಾನೆಟೋರಿಯಂ ಸಂಕೀರ್ಣದಲ್ಲಿ ನಡೆಯಲಿದೆ ಎಂದರು. ಮೂರು ದಿನಗಳಲ್ಲಿ ರೇ ಅವರು ನಿರ್ಮಿಸಿದ ರವೀಂದ್ರನಾಥ ಠಾಗೂರ್ ಅವರ ಸಾಕ್ಷ್ಯಚಿತ್ರವೂ ಸೇರಿದಂತೆ ಒಟ್ಟು ಆರು ಪ್ರಮುಖ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.
ರೇ ಚಿತ್ರೋತ್ಸವವನ್ನು ಮಾ.17ರ ಸಂಜೆ 4ಗಂಟೆಗೆ ಕನ್ನಡ ಖ್ಯಾತನಾಮ ಚಿತ್ರ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಉದ್ಘಾಟಿಸಲಿದ್ದಾರೆ. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ರ ಅಧ್ಯಕ್ಷತೆಯಲ್ಲಿ ನಡೆ ಯುವ ಸಮಾರಂಭದಲ್ಲಿ ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸತ್ಯಜಿತ್ ರೇ ಕುರಿತು ಕಾಸರವಳ್ಳಿ ಶಿಖರೋಪನ್ಯಾಸ ನೀಡಲಿದ್ದಾರೆ. ಸಂಜೆ ೬:೦೦ಗಂಟೆಗೆ ಉದ್ಘಾಟನಾ ಚಿತ್ರವಾಗಿ ರೇ ಅವರ ‘ಪಥೇರ್ ಪಾಂಚಾಲಿ’ ಪ್ರದರ್ಶನಗೊಳ್ಳಲಿದೆ ಎಂದರು.
ಎರಡನೇ ದಿನವಾದ ಮಾ.೧೮ರಂದು ಬೆಳಗ್ಗೆ ೯:೩೦ಕ್ಕೆ ಠಾಗೂರ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಬಳಿಕ ೧೧:೦೦ಕ್ಕೆ ಗಿರೀಶ್ ಕಾಸರವಳ್ಳಿ ಅವರ ಜೊತೆ ಅವರ ಚಲನಚಿತ್ರಗಳು, ಇತರ ಚಲನಚಿತ್ರಗಳು ಹಾಗೂ ಚಲನಚಿತ್ರ ನಿರ್ಮಾಣದ ಕುರಿತು ಸಂವಾದ ನಡೆಯಲಿದೆ. ಆ ದಿನದಂದು ಅಪರಾಹ್ನ ೨:೦೦ಕ್ಕೆ ಕಾಂಚನಜುಂಗಾ, ಸಂಎಜ ೪:೩೦ಕ್ಕೆ ಮಹಾನಗರ್, ೭:೦೦ಕ್ಕೆ ಘರೆ-ಬೈರೆ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಮೂರನೇ ದಿನವಾದ ಮಾ.೧೯ರಂದು ಬೆಳಗ್ಗೆ ೯:೧೫ಕ್ಕೆ ಗಿರೀಶ್ ಕಾಸರವಳ್ಳಿ ಅವರು ‘ಜಾಗತಿಕ ಚನಚಿತ್ರಗಳತ್ತ ಒಂದು ನೋಟ’ ವಿಷಯದ ಕುರಿತು ಉಪನ್ಯಾಸ ನೀಡುವರು. ೧೦:೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಹೆಯ ಕಾರ್ಯಕಾರಿ ಉಪಾಧ್ಯಕ್ಷ ಡಾ.ವಿನೋದ್ ಭಟ್ ಹಾಗೂ ಮಣಿಪಾಲ ಎಂಸಿಎನ್ಎಸ್ ನಿರ್ದೇಶಕ ಡಾ.ಪೃಥ್ವಿರಾಜ್ ಎಂ. ಭಾಗವಹಿಸ ಲಿದ್ದಾರೆ. ೧೧:೧೫ಕ್ಕೆ ಕೊನೆಯ ಚಿತ್ರ ಆಗಂತುಕ್ ಚಿತ್ರ ಪ್ರದರ್ಶನಗೊಳ್ಳಲಿ ಎಂದು ಪ್ರೊ.ಹಿರೇಗಂಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರಾವ್ಯ ಬಾಸ್ರಿ, ಶ್ರೀಕೃಷ್ಣ ಅಡಿಗ, ರಮ್ಯ ಯು, ಜುಡಿ ಫೇಬರ್, ಮರಿಯಂ ರಾಯ್, ಟ್ರೈಫಿನಿ ಫಾಂಸಿಕಾ ಉಪಸ್ಥಿತರಿದ್ದರು.