ಉತ್ತರ ಪ್ರದೇಶ: ಮಗುವನ್ನು ಅಪಹರಿಸಿದ ಆರೋಪದಲ್ಲಿ ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಹತ್ಯೆ

Update: 2022-03-26 06:50 GMT

ಗ್ರೇಟರ್ ನೋಯ್ಡಾ: ಮಗುವನ್ನು ಅಪಹರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ, ನಿರ್ಧಯವಾಗಿ ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಆರೋಪಿ ಗುರುವಾರ ರಾತ್ರಿ 11 ಗಂಟೆಗೆ ಗ್ರೇಟರ್ ನೋಯ್ಡಾದ ಕನರ್ಸಿ ಗ್ರಾಮದ ನರೇಶ್ ಎಂಬವರ ಮನೆಗೆ ನುಗ್ಗಿ 5 ತಿಂಗಳ ಮಗುವನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಮಗು ಅಳಲಾರಂಭಿಸಿದೆ. ಮಗು ಅಳುತ್ತಿರುವುದನ್ನು ಕೇಳಿ  ಮನೆಯ ಸದಸ್ಯರು ಎಚ್ಚರಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಆರೋಪಿಯನ್ನು ಗ್ರಾಮಸ್ಥರು ಹಿಡಿದಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸುವ ಮೊದಲು ಮರಕ್ಕೆ ಕಟ್ಟಿ ಹಾಕಿ ದೊಣ್ಣೆಗಳಿಂದ ಥಳಿಸಿದ್ದಾರೆ.

ಬಳಿಕ ಶುಕ್ರವಾರ ಬೆಳಗ್ಗೆ ಆರೋಪಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ನೇಪಾಳದ ದೊಂಡ್ರಾ ಗ್ರಾಮದ ನಿವಾಸಿ ನಂಕು ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ಕೊತ್ವಾಲಿಗೆ ಕರೆದೊಯ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಂಕು ಮೃತಪಟ್ಟಿದ್ದಾಗಿ ಎಂದು ಹೆಚ್ಚುವರಿ ಡಿಸಿಪಿ ವಿಶಾಲ್ ಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News