ಎ.13ರಿಂದ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ
ಭಟ್ಕಳ: ಸಾರದಹೊಳೆ ಹಳೇಕೋಟೆ ಶ್ರೀ ಹನುಮಂತ ದೇವರ ಪುನರ್ ಪ್ರತಿಷ್ಟಾ ಮಹೋತ್ಸವ ಕಾರ್ಯಕ್ರಮ ವನ್ನು ಎ.13 ರಿಂದ 19ರ ತನಕ ನಡೆಸಲು ತೀರ್ಮಾನಿಸಲಾಗಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿದರು.
ಅವರು ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಶ್ರೀ ದೇವರ ಪುನರ್ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಉಜಿರೆ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಎ.13ರಂದು ಪುರಪ್ರವೇಶ ಮಾಡಲಿದ್ದು ಅಂದು ಸಂಜೆ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯೊಂದಿಗೆ ಕರೆ ತರಲಾಗುವುದು. ನಂತರ ಸ್ವಾಮೀಜಿಯವರಿಂದ ಆಶೀರ್ವಚನ ನಂತರ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಎ.14ರಂದು ಬೆಳಗ್ಗೆ ಪ್ರತಿಷ್ಟಾಂಗ ಪೂರ್ವ ಧಾರ್ಮಿಕ ವಿಧಾನಗಳು ನಡೆಯಲಿದ್ದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎ.15ರಂದು ಬೆಳಿಗ್ಗೆ 9.30ಕ್ಕೆ ಸ್ವಾಮೀಜಿಯವರ ದಿವ್ಯ ಕರಕಮಲಗಳಿಂದ ಶ್ರೀ ಹಳೇಕೋಟೆ ಹನುಮಂತ ದೇವರ ಪ್ರತಿಷ್ಟಾಪನೆ, ತತ್ಸಬಂಧ ಹೋಮ ಹವನಾದಿ ಕಾರ್ಯಕ್ರಮ, ಕುಂಬಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಎ.16ರಂದು ಬೆಳಿಗ್ಗೆ ಹೋಮ-ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಕೋಟೆ ದೇವರ ಪೂಜೆ, ನಂತರ 5 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಉಪನ್ಯಾಸ, 7ಗಂಟೆಯಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಎ.17ರಂದು ಧಾರ್ಮಿಕ ಕಾರ್ಯಕ್ರಮಗಳು, ಬೆಳಗ್ಗೆ 11 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಡಿಯಲ್ಲಿ ಹರಿಕೀರ್ತನೆ, ರಾತ್ರಿ 9ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಎ.18ರಂದು ಎ.19ರಂದು ಸೀತಾ ಕ್ಲಯಾಣೋತ್ಸವ ಕಾರ್ಯಕ್ರಮ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ, ರಾತ್ರಿ 9 ಗಂಟೆಯಿಂದ ಹಾಸ್ಯಮಯ ನಾಟಕ ಜರುಗಲಿದೆ ಎಂದೂ ತಿಳಿಸಿದರು. ಎ.20ರಂದು ಗುರುವಾರ ಶ್ರೀಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದೂ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುನಿಲ್ ನಾಯ್ಕ ಮಾತನಾಡಿ ಎಪ್ರಿಲ್ 13 ರಿಂದ 19ರ ತನಕ ಸಾರದಹೊಳೆ ಶ್ರೀ ಹಳೇಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಟಾ ಮಹೋತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು.
ಎಲ್ಲಾ ಸಮಾಜದ ಜನರು ಕೂಡಾ ಭಾಗವಹಿಸಿ ಪ್ರತಿ ದಿನ ಶ್ರೀ ದೇವರ ಪ್ರಸಾದ ರೂಪದಲ್ಲಿ ನಡೆಯುವ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದ ಅವರು ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಸಂಸದ ಅನಂತಕುಮಾರ ಹೆಗಡೆ, ಇಂಧನ ಸಚಿವ ಸುನಿಲ್ ಕುಮಾರ್, ಮಾಜಿ ಸಚಿವ ಶಾಸಕ ಆರ್.ವಿ. ದೇಶಪಾಂಡೆ, ಶಾಸಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ, ನಾಮಧಾರಿ ಸಮಾಜದ ಕಾರ್ಯದರ್ಶಿ ಜೆ.ಜೆ. ನಾಯ್ಕ, ಮುಕುಂದ ನಾಯ್ಕ, ವೆಂಕಟೇಶ ನಾಯ್ಕ, ಸುಬ್ರಾಯ ನಾಯ್ಕ ಕಾಯ್ಕಿಣಿ ಮುಂತಾ ದವರು ಉಪಸ್ಥಿತರಿದ್ದರು.