ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮುಸ್ಲಿಂ ವಿದ್ಯಾಸಂಸ್ಥೆಗಳ ಸಮಾವೇಶ
ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ʼಮೀಫ್ʼ (ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ) ಸದಸ್ಯ 91 ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸಮಾವೇಶವು ಮಂಗಳೂರಿನ ಕಂಕನಾಡಿ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
ಮೂಳೂರು ಅಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮೌಲಾನ ಮುಸ್ತಫಾ ಸಅದಿ ದುಆ ಪ್ರಾರ್ಥನೆ ನೆರವೇರಿಸಿದರು. ಮೀಫ್ ಗೌರವಾಧ್ಯಕ್ಷ ಉಮರ್ ಟೀಕೇ ಅವರು ಪ್ರಚಲಿತ ಸನ್ನಿವೇಶಗಳಲ್ಲಿ ಮೀಫ್ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ನಡೆದ 2 ತಿಂಗಳ ವಾರಾಂತ್ಯದ ಎಸೆಸೆಲ್ಸಿ ವಿದ್ಯಾರ್ಥಿಗಳ ವಿಶೇಷ ಶಿಬಿರದಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಯೊಂದಿಗೆ ಬಹುಮಾನ ವಿತರಿಸಲಾಯಿತು.
2021-22ನೇ ಸಾಲಿನಲ್ಲಿ ಮೀಫ್ ಕೈಗೊಂಡ ಕಾರ್ಯಕ್ರಮಗಳ ಸಂಪೂರ್ಣ ಚಿತ್ರ ವರದಿಯನ್ನು ಗೌರವಾಧ್ಯಕ್ಷರು ಬಿಡುಗಡೆಗೊಳಿಸಿದರು. ಮೂಸಬ್ಬ ಪಿ ಬ್ಯಾರಿ ಅವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಭಯ ಜಿಲ್ಲೆಗಳಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು
1. ದಿನಾಂಕ 28-03-2022ರಿಂದ ಆರಂಭಗೊಂಡಿರುವ ಎಸೆಸೆಲ್ಸಿ ಪರೀಕ್ಷೆಗೆ ಮೀಫ್ ವ್ಯಾಪ್ತಿಯ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿನಿಯರು ತಮ್ಮ ವಿದ್ಯಾಸಂಸ್ಥೆಯು ನಿಗದಿಪಡಿಸಿರುವ ಸಮವಸ್ತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವುದು, ಯಾವುದೇ ಸಂದರ್ಭದಲ್ಲೂ ಪರೀಕ್ಷೆಗೆ ಗೈರು ಹಾಜರಾಗದಂತೆ ಆಡಳಿತ ಮಂಡಳಿಗಳು ಗಮನ ಹರಿಸುವುದು.
2. ಮೂಲಭೂತ ಸೌಕರ್ಯಗಳಿದ್ದಂತಹ ವಿದ್ಯಾಸಂಸ್ಥೆಗಳು, ಎಸೆಸೆಲ್ಸಿ ನಂತರ ಪಿಯುಸಿ ವಿಭಾಗ ತೆರೆಯಲು ಪ್ರಯತ್ನಿಸುವುದು.
3. ಯಾವುದೇ ವಿದ್ಯಾ ಸಂಸ್ಥೆಗಳು ಹೊಸತಾಗಿ ಆಂಗ್ಲ ಮಾಧ್ಯಮ ಆರಂಭಿಸುವುದಿದ್ದಲ್ಲಿ ಅಥವಾ ಪಿಯುಸಿ ವಿಭಾಗ ತೆರೆಯುವುದಾದಲ್ಲಿ ಅವರಿಗೆ ಅಗತ್ಯ ಮಾಹಿತಿ ನೀಡಲು ಮೀಫ್ ಕಚೇರಿಯಲ್ಲಿ ಒಂದು 'Help Desk' ತೆರೆಯಲು ತೀರ್ಮಾನಿಸಲಾಯಿತು.
4. ಪಿಯುಸಿ ವಿಭಾಗ ಹೊಂದಿರುವ ವಿದ್ಯಾಸಂಸ್ಥೆಗಳು ಸಾಧ್ಯವಿದ್ದಷ್ಟು ಪರಿಸರದಲ್ಲಿ ಬಡ ವಿದ್ಯಾರ್ಥಿಗಳನ್ನು ದತ್ತು ರೂಪದಲ್ಲಿ ಪಡೆದು ಅವರಿಗೆ ಉಚಿತ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿಕೊಡಬೇಕಾಗಿ ನಿರ್ಣಯಿಸಲಾಯಿತು.
5. ಉನ್ನತ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಒಂದು ಸ್ಟಡಿ ಸೆಂಟರ್ ಮಂಗಳೂರಿನಲ್ಲಿ ತೆರೆಯುವುದು.
6. ಮೀಫ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಬಲಿಷ್ಠ ಪಡಿಸಲು ಮುಂದಿನ ಸಾಲಿನಿಂದ ವಿಭಾಗವಾರು ತರಬೇತಿ ಶಿಬಿರಗಳನ್ನು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸಂಘಟಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷರಾದ ರಶೀದ್ ಹಾಜಿ, ಮೆಲ್ಕಾರ್ ವಿಮೆನ್ಸ್ ಕಾಲೇಜ್ ಅಧ್ಯಕ್ಷರಾದ ಎಸ್.ಎಂ. ರಶೀದ್ ಹಾಜಿ, ಮಿಸ್ಬಾಹ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಕಾಟಿಪಳ್ಳ ಇದರ ಅಧ್ಯಕ್ಷರೂ ಮೀಫ್ ಉಪಾಧ್ಯಕ್ಷರೂ ಆದ ಬಿಎಂ ಮುಮ್ತಾಝ್ ಅಲಿ, ಜಮೀಯ್ಯತುಲ್ ಫಲಾಹ್ ಸಂಸ್ಥೆಯ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಸಾಬಿಹ್ ಖಾಝಿ, ಮೀಫ್ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಹಾಗೂ ಜೊತೆ ಕಾರ್ಯದರ್ಶಿಗಳಾದ ರಿಯಾಝ್ ಅಹ್ಮದ್, ಪಿ.ಎ ಇಲ್ಯಾಸ್ ಕಾಟಿಪಳ್ಳ, ಬಿ. ಮಯ್ಯದ್ದಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎ.ಇಕ್ಬಾಲ್, ನಿಸಾರ್ ಮೊಹಮ್ಮದ್, ಇಬ್ರಾಹೀಂ ಉಳ್ಳಾಲ್ ಹಾಗೂ ಉಭಯ ಜಿಲ್ಲೆಗಳ ವಿದ್ಯಾಸಂಸ್ಥೆಯ ಅಧ್ಯಕ್ಷರು ಮತ್ತು ಸಂಚಾಲಕರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಬಿಎ ನಝೀರ್ ಸ್ವಾಗತಿಸಿ, ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮಣಿಪಾಲ್ ಕಾರ್ಯಕ್ರಮ ನಿರೂಪಿಸಿದರು.