ಸಗಣಿ ನಂತರ ಇದೀಗ ಗೋಮೂತ್ರ ಖರೀದಿಸಲು ಮುಂದಾದ ಛತ್ತೀಸಗಢ ಸರಕಾರ
ರಾಯಪುರ್: ತನ್ನ ಗೋಧನ್ ನ್ಯಾಯ್ ಯೋಜನೆಯ ಮುಖಾಂತರ ರೈತರಿಂದ ದನದ ಸಗಣಿಯನ್ನು ಖರೀದಿಸುವ ಯೋಜನೆಯನ್ನು 2020ರಲ್ಲಿ ಜಾರಿಗೊಳಿಸಿದ್ದ ಛತ್ತೀಸಗಢದ ಕಾಂಗ್ರೆಸ್ ಸರಕಾರ ಇದೀಗ ಈ ಯೋಜನೆಯನ್ನು ವಿಸ್ತರಿಸಿ ರೈತರಿಂದ ಗೋಮೂತ್ರವನ್ನು ಖರೀದಿಸುವ ಕುರಿತು ಚಿಂತಿಸುತ್ತಿದೆ. ಈ ಕುರಿತು ಚರ್ಚಿಸಲು ಬುಧವಾರ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಅಧಿಕಾರಿಗಳ ಸಭೆ ನಡೆಸಿದ್ದು ಈ ವಿಚಾರ ಪರಿಶೀಲಿಸಲು ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದಿದ್ದಾರೆ.
ಇಂದಿರಾ ಗಾಂಧಿ ಕೃಷಿ ವಿವಿ ಮತ್ತು ಕಾಮಧೇನು ವಿವಿಯ ತಜ್ಞರು ಕೂಡ ಈ ಸಮಿತಿಯಲ್ಲಿರಲಿದ್ದು ಸಮಿತಿ ತನ್ನ ವರದಿಯನ್ನು 15 ದಿನಗಳಲ್ಲಿ ನೀಡಲಿದೆ. ಗೋಮೂತ್ರ ಸಂಗ್ರಹ, ಗುಣಮಟ್ಟ ಪರೀಕ್ಷೆ ಹಾಗೂ ಅದರಿಂದ ತಯಾರಿಸಬಹುದಾದ ಉತ್ಪನ್ನಗಳ ಕುರಿತು ಸಮಿತಿ ಅಧ್ಯಯನ ನಡೆಸಲಿದೆ.
ಗೋಮೂತ್ರದಿಂದ ಸಾವಯವ ರಸಗೊಬ್ಬರ ಹಾಗೂ ಬಯೋ ಎನ್ಝೈಮ್ಗಳನ್ನು ಹೇಗೆ ತಯಾರಿಸಬಹುದೆಂಬ ಕುರಿತೂ ಸಭೆಯಲ್ಲಿ ಚರ್ಚೆಗಳು ನಡೆದಿವೆ.
ಸಗಣಿ ಖರೀದಿಸುವ ರೀತಿಯಲ್ಲಿಯೇ ಗೋಮೂತ್ರವನ್ನು ಗ್ರಾ,ಮ್ ಗೌಥನ್ ಸಮಿತಿ ಮೂಲಕ ಖರೀದಿಸಿ ಹದಿನೈದು ದಿನಗಳಿಗೊಮ್ಮೆ ಸಂಬಂಧಿತರಿಗೆ ಹಣ ಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಧನ್ ನ್ಯಾಯ್ ಯೋಜನೆಯಂತೆ ಸರಕಾರವು ರೈತರಿಂದ ಕೆಜಿಗೆ ರೂ 1.50ರಂತೆ ಸಗಣಿಯನ್ನು ಈಗಾಗಲೇ ಖರೀದಿಸುತ್ತಿದೆ.