ಗೃಹ ಸಚಿವ ಆರಗ ಜ್ಞಾನೇಂದ್ರ, ಸಿ.ಟಿ.ರವಿ ವಿರುದ್ಧ ಭಟ್ಕಳ ಪೊಲೀಸ್ ಠಾಣೆಗೆ ದೂರು
ಭಟ್ಕಳ: ಬೆಂಗಳೂರಿನಲ್ಲಿ ನಡೆದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರ.ಕಾ.ಸಿ.ಟಿ.ರವಿ ಜನರನ್ನು ಪ್ರಚೋದಿಸುತ್ತಿದ್ದಾರೆ ಹಾಗೂ ತಪ್ಪುದಾರೆಗೆಳೆಯುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅಪಘಾತದಿಂದ ಆರಂಭವಾದ ವಾಗ್ವಾದ ಕೊಲೆಯಾಗಿ ವಿಕೋಪಕ್ಕೆ ಹೋಗಿದ್ದರೂ ಗೃಹ ಸಚಿವರು ಅದನ್ನು ಬೇರೆಯ ರೀತಿಯಲ್ಲಿ ಬಿಂಬಿಸಿ ರಾಜ್ಯಾದ್ಯಂತ ಕೋಮುಗಲಭೆಗೆ ಕಾರಣವಾಗುವಂತಹ ಹೇಳಿಕೆ ನೀಡಿದ್ದು, ಗಲಭೆ ಹರಡುವ ಅಪಾಯವಿದೆ. ಹಾಗು ಸಿ.ಟಿ.ರವಿ ಗೃಹ ಸಚಿವರ ಹೇಳಿಕೆಯನ್ನು ಬೆಂಬಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಂತಹ ಪ್ರಚೋದನಕಾರಿ ಹೇಳಿಕೆಗಳು ಮತೀಯ ಕಲಹವನ್ನು ಪ್ರಚೋದಿಸುವ ಮತ್ತು ಅದರ ರಾಜಕೀಯ ಲಾಭ ಪಡೆಯುವ ಗುರಿಯನ್ನು ಹೊಂದಿವೆ ಎಂದು ದೂರಿನಲ್ಲಿ ಹೇಳಲಾಗಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಹದಗೆಡಿಸಿ ವಿವಿಧ ಪಂಗಡಗಳ ನಡುವೆ ದ್ವೇಷದ ವಾತಾವರಣ ಸೃಷ್ಟಿಸಿದ ಆರೋಪದ ಮೇಲೆ ಐಪಿಸಿ ಕಲಂ 120ಬಿ, 124ಎ, 153ಎ, 153ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಿಖಿತವಾಗಿ ದೂರನ್ನು ನೀಡಲಾಗಿದೆ.