ಉ.ಕ. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ಎಚ್.ಶಬ್ಬರ್ ನಿಧನ
ಭಟ್ಕಳ: ಭಟ್ಕಳದ ನವಾಯತ್ ಮುಖಂಡ, ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಾಮುದಾಯಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದಾಮ್ದಾ ಹಸನ್ ಶಬ್ಬರ್ (90) ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಭಟ್ಕಳ ಪುರಸಭೆ, ತಂಝೀಮ್ ಸಂಸ್ಥೆ, ಅಂಜುಮನ್ ಶಿಕ್ಷಣ ಸಂಸ್ಥೆ ಹಾಗೂ ಉ.ಕ ಜಿಲ್ಲಾ ಕಾಂಗ್ರೇಸ್ ನಲ್ಲೂ ಸಕ್ರೀಯರಾಗಿದ್ದ ಇವರು ಕಳೆದ ಹಲವಾರು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ನಿರಂತರವಾಗಿ 22 ವರ್ಷಗಳ ಕಾಲ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ದಿ. ಎಸ್.ಎಂ.ಯಾಹ್ಯಾ ಹಾಗೂ ದಿ. ಎಂ.ಎ.ಗನಿಯವರೊಂದಿಗೆ ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು. ನವಾಯತ್ ಸಮುದಾಯದ ಪ್ರಥಮ ಬಿಕಾಂ ಪದವಿಧರ ಎಂದ ಕೀರ್ತಿಗೆ ಭಾಜನರಾಗಿದ್ದ ಇವರು ಅತ್ಯಂತ ಸರಳ ಜೀವನವನ್ನು ನಡೆಸಿದ್ದರು. ತಮ್ಮ ಇಡೀ ಬದುಕನ್ನು ಸಮುದಾಯದ ಸೇವೆಗಾಗಿ ಮೀಸಲಿಟ್ಟಿದ್ದರು.
ಇವರ ನಿಧನಕ್ಕೆ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಕಾಝಿಯ, ತಂಝಿಮ್ ಅಧ್ಯಕ್ಷ ಎಸ್.ಎಂ ಪರ್ವಾಝ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆ, ಸಂಘಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ರಾಜಕೀಯ ಮುಖಂಡರು ಸಂತಾಪವನ್ನು ಸೂಚಿಸಿದ್ದಾರೆ.
ಇವರ ನಿಧನಕ್ಕೆ ಸಂತಾಪ ಸೂಚಿಸುತ್ತ ಶನಿವಾರ ಅಂಜುಮನ್ ಶಿಕ್ಷಣ ಸಂಸ್ಥೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿತ್ತು.