ಉಗುಳಿನಲ್ಲಿ ದಲಿತ ವ್ಯಕ್ತಿಯ ಮೂಗು ಉಜ್ಜಿಸಿದ ಗ್ರಾಮ ಮುಖ್ಯಸ್ಥನ ವಿರುದ್ಧ ಪ್ರಕರಣ ದಾಖಲು
ಭುವನೇಶ್ವರ, ಎ. 21: ದೇವಾಲಯದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪಿಸಲು ಹೆಚ್ಚು ಹಣ ದೇಣಿಗೆ ನೀಡಲು ನಿರಾಕರಿಸಿದ ಬಳಿಕ ದಲಿತ ವ್ಯಕ್ತಿಯೋರ್ವನನ್ನು ಆತನ ಉಗುಳಿನಲ್ಲೇ ಮೂಗು ಉಜ್ಜುವಂತೆ ಮಾಡಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಾಲಯಕ್ಕೆ ದೇಣಿಗೆ ಸಂಗ್ರಹಿಸಲು ಟಿಖಿರಿ ಗ್ರಾಮದ ಮುಖ್ಯಸ್ಥ ಚಮೇಲಿ ಓಝಾ ಅವರು ಕಳೆದ ವಾರ ದಲಿತ ವ್ಯಕ್ತಿ ಗುರುಚರಣ್ ಮಲ್ಲಿಕ್ ಅವರ ಮನೆಗೆ ತೆರಳಿದ ಒಂದು ವಾರಗಳ ಬಳಿಕ ಈ ಘಟನೆ ನಡೆದಿದೆ.
ತಾನು ಈಗಾಗಲೇ ದೇಣಿಗೆ ನೀಡಿದ್ದೆ. ಆದರೂ ಗ್ರಾಮ ಮುಖ್ಯಸ್ಥ ತನಗೆ ಹಾಗೂ ತನ್ನ ಪತ್ನಿ ರೇಖಾಳಿಗೆ ನಿಂದಿಸಿದ್ದಾನೆ ಎಂದು ಮಲ್ಲಿಕ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಗ್ರಾಮ ಮುಖ್ಯಸ್ಥ ನಮ್ಮ ಕುಟುಂಬವನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಆದರೆ, ಅನಂತರ ಇತರ ಗ್ರಾಮಸ್ಥರೊಂದಿಗೆ ಸೇರಿ ಅವರು ಬಲವಂತವಾಗಿ ಮಲ್ಲಿಕ್ ತನ್ನದೇ ಉಗುಳಿನಲ್ಲಿ ಮೂಗು ಉಜ್ಜುವಂತೆ ಮಾಡಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರೇಖಾ ಆರೋಪಿಸಿದ್ದಾರೆ.