ತಮಿಳುನಾಡು: ಮತ್ತೊಂದು ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ
ಚೆನ್ನೈ, ಮೇ 1: ತಮಿಳುನಾಡಿನ ಕೃಷ್ಣಗಿರಿಯಲ್ಲಿ ಶನಿವಾರ ಇಲೆಕ್ಟ್ರಿಕ್ ಸ್ಕೂಟರ್ ಒಂದು ಬೆಂಕಿಗಾಹುತಿಯಾಗಿದೆ. ಆದರೆ, ಅದೃಷ್ಟವಶಾತ್ ಚಾಲಕ ಸತೀಶ್ ಕುಮಾರ್ ಅವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.
ಹೊಸೂರಿನಲ್ಲಿರುವಾಗ ಇಲೆಕ್ಟ್ರಿಕ್ ಸ್ಕೂಟರ್ ನ ಸೀಟಿನ ಅಡಿಯಿಂದ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವುದನ್ನು ಕುಮಾರ್ ಅವರು ಗಮನಿಸಿದ್ದರು. ಕೂಡಲೇ ಅವರು ಸ್ಕೂಟರ್ ನಿಂದ ಕೆಳಗೆ ಹಾರಿದ್ದರು. ಬೆಂಕಿ ಹೊತ್ತಿಕೊಂಡ ಸ್ಕೂಟರ್ ಸ್ವಲ್ಪ ದೂರ ಚಲಿಸಿ ಬಿದ್ದಿತು. ಈ ಸಂದರ್ಭ ಸಮೀಪದ ನಿವಾಸಿಗಳು ಧಾವಿಸಿ ಬಂದು ಸ್ಕೂಟರ್ ನ ಬೆಂಕಿ ನಂದಿಸುವಲ್ಲಿ ಕುಮಾರ್ ಅವರಿಗೆ ಸಹಕರಿಸಿದರು. ಆದರೆ, ಸ್ಕೂಟರ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ಅವರು ಇ-ವಾಹನ ಉತ್ಪಾದಕ ಕಂಪೆನಿಯಾದ ಒಕಿನಾವಾ ಅಟೋಟೆಕ್ನಿಂದ ಕಳೆದ ವರ್ಷ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. ಶನಿವಾರ ಅವರು ಝಝುವಾಡಿಯಿಂದ ಉಪ್ಕಾರ್ ಲೇಔಟ್ಗೆ ಸಂಚರಿಸುತ್ತಿರುವ ಸಂದರ್ಭ ಈ ಘಟನೆ ಸಂಭವಿಸಿದೆ. ಅವರು ತಮಿಳುನಾಡು ಪೊಲೀಸ್ ಠಾಣೆಯ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮಕ್ಕೆ ದೂರು ಸಲ್ಲಿಸಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ರಾಜ್ಯದಲ್ಲಿ ಕನಿಷ್ಠ 4 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸ್ಪೋಟಗೊಂಡಿರುವುದು ವರದಿಯಾಗಿದೆ. ಇದು ಎಲಕ್ಟ್ರಿಕ್ ಸ್ಕೂಟರ್ ಖರೀದಿಗಾರರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆ.