ಶ್ರೀಲಂಕಾಕ್ಕೆ ನೆರವು: ಕೇಂದ್ರದ ಅನುಮತಿ ಕೋರಿ ತಮಿಳುನಾಡು ನಿರ್ಣಯ ಅಂಗೀಕಾರ
Update: 2022-05-01 18:47 GMT
ಚೆನ್ನೈ: ಶ್ರೀಲಂಕಾಕ್ಕೆ ಅಕ್ಕಿ ಹಾಗೂ ಅಗತ್ಯದ ಔಷಧಗಳ ಪೂರೈಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಕೋರಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ತಮಿಳುನಾು ವಿಧಾನ ಸಭೆ ನಿರ್ಣಯ ಅಂಗೀಕರಿಸಿದೆ.
ತಮಿಳುನಾಡು ವಿಧಾನ ಸಭೆ ಅಂಗೀಕರಿಸಿದ ಈ ನಿರ್ಣಯ ಹಾಗೂ ತಮಿಳುನಾಡಿನ ಜನರು ಶ್ರೀಲಂಕಾ ಜನರಿಗೆ ನೀಡುತ್ತಿರುವ ನೆರವನ್ನು ಬಿಜೆಪಿಯ ರಾಜ್ಯ ಘಟಕ ಸ್ವಾಗತಿಸಿದೆ.
ವಿಧಾನ ಸಭೆಯಲ್ಲಿ ನಿರ್ಣಯ ಸರ್ವಸಮ್ಮತವಾಗಿ ಅಂಗೀಕೃತವಾಯಿತು. ವಿಶೇಷವೆಂದರೆ, ನೆರವು ನೀಡುವ ಸರಕಾರದ ನಿರ್ಣಯದ ಜೊತೆಗೆ ಪ್ರತಿಪಕ್ಷ ಎಐಎಡಿಎಂಕೆಯ ಒ. ಪನ್ನೀರ್ಸೆಲ್ವಂ ಅವರು ಶ್ರೀಲಂಕಾ ತಮಿಳರಿಗೆ ತನ್ನ ವೈಯುಕ್ತಿಕ ನೆರವಾಗಿ 50 ಲಕ್ಷ ರೂಪಾಯಿ ಘೋಷಿಸಿದರು. ನೆರವು ಪೂರೈಕೆಗೆ ಅನುಮತಿ ಕೋರಿ ಈ ಹಿಂದೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾದ ಮನವಿ ಕುರಿತಂತೆ ತಮಿಳುನಾಡು ಸರಕಾರ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಸ್ವೀಕರಿಸಿಲ್ಲ ಎಂದು ಮುಖ್ಯಮಂತ್ರಿ ವಿಧಾನ ಸಭೆಗೆ ತಿಳಿಸಿದರು.